ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪೊಲೀಸ್ ವೃತ್ತಿಯಲ್ಲಿ ಸೇವೆಗೆ ಅವಕಾಶ ದೊರಕಿರುವುದು ಭಾಗ್ಯವಾಗಿದ್ದು, ಜನರಿಗೆ ರಕ್ಷಣೆ ನೀಡುವ ಕಾರ್ಯವನ್ನು ನಿಷ್ಠೆಯಿಂದ ಮಾಡುವುದರಿಂದ ಸಮಾಜ ನಮ್ಮನ್ನು ಗೌರವಿಸುತ್ತದೆ. ಒಳ್ಳೆಯ ಕಾರ್ಯಗಳು ಎಂದಿಗೂ ಜನರಿಗೆ ನೆನಪಿನಲ್ಲಿ ಉಳಿಯುತ್ತವೆ ಎಂದು ಡಿವೈಎಸ್ಪಿಯಾಗಿ ಪದೋನ್ನತಿ ಹೊಂದಿದ ನಾಗರಾಜ ಮಾಡಳ್ಳಿ ಹೇಳಿದರು.
ಅವರು ಪಟ್ಟಣದ ಸವಣೂರು ರಸ್ತೆಯಲ್ಲಿರುವ ಬಿಸಿಎನ್ ಸಭಾಂಗಣದಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕುಗಳ ಪೊಲೀಸ್ ಇಲಾಖೆ ವತಿಯಿಂದ ನೀಡಲಾದ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ಶಿರಹಟ್ಟಿ ಠಾಣಾ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಿಗೂ ಅಧಿಕ ಕಾಲ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದು, ಈ ವೇಳೆಯಲ್ಲಿ ಅನೇಕ ಪ್ರಕರಣಗಳಲ್ಲಿ ಭಾಗಿಯಾದ ಅಪರಾಧಿಗಳನ್ನು ಸೆರೆ ಹಿಡಿದಿರುವುದರ ಜೊತೆಗೆ ಸಾಕಷ್ಟು ಕಳ್ಳ ಮಾಲುಗಳನ್ನು ವಶಪಡಿಸಿಕೊಂಡಿದ್ದು, ಇದು ಜಿಲ್ಲಾ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವಲ್ಲಿ ಸಾರ್ವಜನಿಕರು, ಇಲಾಖೆಯ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳು ನೀಡಿದ ಸಹಕಾರ ಸದಾ ಸ್ಮರಣೀಯ. ಪದೋನ್ನತಿ ಹೊಂದಿ ಬೇರೆಡೆ ವರ್ಗಾವಣೆಯಾಗುತ್ತಿದ್ದು, ಮುಂದೆ ಬರುವ ಅಧಿಕಾರಿಗಳಿಗೂ ಇದೇ ರೀತಿ ಸಹಾಯ ಸಹಕಾರ ದೊರೆಯಲಿ ಎಂದರು.
ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ, ಲಕ್ಷ್ಮೇಶ್ವರ ಪಿಎಸ್ಐ ನಾಗರಾಜ ಗಡಾದ ಮಾತನಾಡಿ, ನಾಗರಾಜ ಮಾಡಳ್ಳಿಯವರು ಈ ಭಾಗದಲ್ಲಿ ಸಾಕಷ್ಟು ಕಾರ್ಯಗಳನ್ನು ಮಾಡಿದ್ದು, ಅನೇಕ ಅಪರಾಧ ಪತ್ತೆಗಾಗಿ ಅವರ ಮಾರ್ಗದರ್ಶನ ದೊರೆತಿದೆ, ಅಲ್ಲದೆ ಅನೇಕ ಪ್ರಕರಣಗಳನ್ನು ಬಿಚ್ಚುವ ಸಂದರ್ಭದಲ್ಲಿ ಅವರು ಪ್ರತಿಯೊಂದು ಅಂಶವನ್ನು ತಿಳಿಸಿ ಪತ್ತೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಇದೀಗ ಅವರು ವೃತ್ತಿಯಲ್ಲಿ ಪದೋನ್ನತಿ ಹೊಂದಿರುವುದು ಅವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನೂತನವಾಗಿ ಸಿಪಿಐ ಆಗಿ ಆಗಮಿಸಿರುವ ಬಿ.ವಿ. ನ್ಯಾಮಗೌಡ ಅವರನ್ನು ಸನ್ಮಾನಿಸಿ ಸ್ವಾಗತಿಸಲಾಯಿತು. ಸಿಪಿಐ ಬಿ.ವಿ. ನ್ಯಾಮಗೌಡ ಮಾತನಾಡಿದರು. ವೇದಿಕೆಯಲ್ಲಿ ಕ್ರೈಂ ವಿಭಾಗದ ಪಿಎಸ್ಐ ಟಿ.ಕೆ. ರಾಥೋಡ ಮತ್ತಿತರರು ಇದ್ದರು. ರಂಗ್ರೇಜ್ ಸ್ವಾಗತಿಸಿ, ನಿರೂಪಿಸಿದರು.


