ಅಧಿಕಾರದ ಆಸೆಗೆ ಸಮಾಜವನ್ನು ಒಡೆಯಬಾರದು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವದಲ್ಲಿ ರಾಜ್ಯಾದ್ಯಂತ ಪ್ರತಿ ದಿನ 2-3 ಜಿಲ್ಲೆಗಳಲ್ಲಿ `ಜನಾಕ್ರೋಶ ಯಾತ್ರೆ’ ನಡೆಸಲಾಗುತ್ತಿದ್ದು, ಎಪ್ರಿಲ್ 22ರಂದು ಗದಗ ನಗರದಲ್ಲಿ ಯಾತ್ರೆ ನಡೆಯಲಿದೆ. ಬಸವೇಶ್ವರ ಸರ್ಕಲ್‌ನಿಂದ ಗಾಂಧಿ ಸರ್ಕಲ್‌ವರೆಗೆ ಯಾತ್ರೆ ನಡೆಯಲಿದ್ದು, ಅಂತಿಮವಾಗಿ ಗಾಂಧಿ ಸರ್ಕಲ್‌ನಲ್ಲಿ ಬಹಿರಂಗ ಸಮಾವೇಶ ನಡೆಯಲಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ, ಬಿ. ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ ಪಾಟೀಲ ಮಾಹಿತಿ ನೀಡಿದರು.

Advertisement

ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

2023ರ ಚುನಾವಣೆಯಲ್ಲಿ ಪಕ್ಷ ಐದು ಗ್ಯಾರಂಟಿ ನೀಡಿ, ಜನರ ಬದುಕು ಸುಧಾರಿಸುತ್ತೇವೆ ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅದರಂತೆ ಪಂಚ ಗ್ಯಾರಂಟಿ ಯೋಜನೆಗೆ ವರ್ಷಕ್ಕೆ 51 ಸಾವಿರ ಕೋಟಿ ಬೇಕಾಗುತ್ತದೆ. ಅಧಿಕಾರಕ್ಕೆ ಬಂದ ನಂತರ ರಾಜ್ಯ ಸರ್ಕಾರ ಮೂರು ಪಟ್ಟು ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರಿಗೆ ಬರೆ ಎಳೆದಿದ್ದಾರೆ ಎಂದು ಸಿದ್ದರಾಮಯ್ಯ ನಾಯಕತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಜೆಟ್ ಪುಸ್ತಕದಲ್ಲಿ ಯಾವುದೇ ತೆರಿಗೆ ಹಾಕಲಿಲ್ಲ. ಆದರೆ, ಎಪ್ರಿಲ್ 1ರಿಂದ ದರ ಏರಿಕೆಯ ಬಿಸಿ ಮುಟ್ಟಿಸಿದ್ದು, ವಿದ್ಯುತ್ ದರದಲ್ಲಿ ಏರಿಕೆ, ಕೇವಲ ಎರಡು ವರ್ಷದ ಅವಧಿಯಲ್ಲಿ ಹಾಲಿನ ದರ 9 ರೂ ಏರಿಕೆ, ಡಿಸೆಲ್ ದರ 2 ರೂ ಏರಿಕೆ, ಶೇ. 15 ಬಸ್ ದರ ಏರಿಕೆ, ಛಾಪಾ ಕಾಗದ 20ರಿಂದ 100ಕ್ಕೆ ಏರಿಕೆ, ವೈದ್ಯಕೀಯ ದರದಲ್ಲೂ ಏರಿಕೆಯಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 40 ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಡೀಸೆಲ್ ದರ ಏರಿಕೆಯಿಂದ ಸಾರಿಗೆ ನಿಗಮದ ಶಕ್ತಿ ಕುಂದಲಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ಮಹೇಶ ದಾಸರ, ಹಿರಿಯ ಮುಖಂಡರಾದ ಎಂ.ಎಂ ಹಿರೇಮಠ, ಎಂ.ಎಸ್ ಕರಿಗೌಡ್ರ, ರಾಘವೇಂದ್ರ ಯಳವತ್ತಿ, ನಿರ್ಮಲಾ ದಶರಥ ಕೊಳ್ಳಿ, ಸಿದ್ದಣ್ಣ ಪಲ್ಲೇದ, ವಿಜಯಲಕ್ಷ್ಮೀ ದಿಂಡೂರ, ವಿದ್ಯಾವತಿ ಗಡಗಿ, ಶ್ವೇತಾ ದಂಡಿನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಿಂದೂ ಸಮುದಾಯದ ಎಲ್ಲ ಜಾತಿಗಳಲ್ಲಿ ಉಪ ಜಾತಿಗಳನ್ನು ಹುಡುಕಲಾಗಿದೆ. ಆದರೆ, ಮುಸಲ್ಮಾನರಲ್ಲಿ ಯಾವುದೇ ಉಪ ಜಾತಿಗಳನ್ನು ಹುಡುಕಲಿಲ್ಲ. ಇದು ಸಿದ್ದರಾಮಯ್ಯನವರ ದುರಹಂಕಾರದ ಪರಮಾವಧಿ. ಅಧಿಕಾರದ ಆಸೆಗಾಗಿ ಸಮಾಜವನ್ನು ಒಡೆಯಬಾರದು. ಸರ್ವಜನಾಂಗದ ಶಾಂತಿಯ ತೋಟವನ್ನು ಸಿಎಂ ಒಡೆಯಲು ಹೊರಟಿದ್ದಾರೆ. ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಾಂಗ್ರೆಸ್ ಕೈ ಸುಟ್ಟುಕೊಂಡಿತ್ತು. ಜಾತಿ ಗಣತಿ ಮೂಲಕ ಮತ್ತೆ ಹಿಂದೂ ಧರ್ಮ ಒಡೆಯುವ ಹುನ್ನಾರ ನಡೆದಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತಲೆ ಎತ್ತದಂತೆ ನೆಲ ಕಚ್ಚುತ್ತದೆ.

– ಸಿ.ಸಿ. ಪಾಟೀಲ.

ಮಾಜಿ ಸಚಿವ, ಶಾಸಕ.


Spread the love

LEAVE A REPLY

Please enter your comment!
Please enter your name here