ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಲ್ ಸೋಫಿಯಾ ಅವರು `ಆಪರೇಷನ್ ಸಿಂಧೂರ’ದ ನಂತರ ಸಮಸ್ತ ಭಾರತೀಯರು ಹೆಮ್ಮೆ ಪಡುವಂತಹ ದಿಟ್ಟ ಮುಸ್ಲಿಂ ಸಮುದಾಯದ ವೀರ ವನಿತೆಯಾಗಿ ಪಾಕಿಸ್ತಾನಿ ಭಯೋತ್ಪಾದಕರಿಗೆ ನರಕದ ಹಾದಿ ತೋರಿಸುವ ಮೂಲಕ ಜನಮನ ಗೆದ್ದಿದ್ದಾರೆ ಎಂದು ಗದಗ-ಬೆಟಗೇರಿ ನಗರಸಭೆಯ ಸದಸ್ಯರು ಹಾಗೂ ವಿರೋಧ ಪಕ್ಷದ ಉಪ ನಾಯಕರಾದ ಜನಾಬ ಬರಕತ ಅಲಿ ಮುಲ್ಲಾ ಶ್ಲಾಘಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸೋಫಿಯಾ ದಿಟ್ಟತನದಿಂದ `ಫೋರ್ಸ್ 18′ ಅನ್ನು ಸಹ ಮುನ್ನಡೆಸಿದ್ದಾರೆ. 2006ರಲ್ಲಿ `ಫೋರ್ಸ್ 18’ನಲ್ಲಿ ಭಾಗವಹಿಸಿದ 18 ದೇಶಗಳ ಪ್ರತಿನಿಧಿಗಳಲ್ಲಿ ಸೋಫಿಯಾ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು. ಅವರ ಸಾಧನೆಯನ್ನು ಭಾರತದ ಮೊದಲ ರಕ್ಷಣಾ ಮುಖ್ಯಸ್ಥ ಮತ್ತು ಮಾಜಿ ರಕ್ಷಣಾ ಸಿಬ್ಬಂದಿ (ಸಿಡಿಎಸ್) ದಿವಂಗತ ಜನರಲ್ ಬಿಪಿನ್ ರಾವತ್ ಶ್ಲಾಘಿಸಿದ್ದರು. ಸೇನೆಯಲ್ಲಿ ನಾವು ಸಮಾನ ಅವಕಾಶಗಳು ಮತ್ತು ಜವಾಬ್ದಾರಿಗಳನ್ನು ಪರಿಗಣಿಸುವ ಮೂಲಕ ಪುರುಷ ಮತ್ತು ಮಹಿಳಾ ಅಧಿಕಾರಿಗಳ ನಡುವೆ ಯಾವುದೇ ತಾರತಮ್ಯವಿಲ್ಲ ಎಂದೂ ಅವರು ತಿಳಿಸಿದ್ದರು.
ಒಟ್ಟಿನಲ್ಲಿ ಮುಸ್ಲಿಂ ಸಮುದಾಯದಲ್ಲಿ ಜನಿಸಿದ ದಿಟ್ಟ ಮಹಿಳೆಯೊಬ್ಬಳು ಭಾರತೀಯ ಸೇನೆಯಲ್ಲಿ ಅದರಲ್ಲೂ ಪಾಕಿಸ್ತಾನದ ವಿರುದ್ಧ 26 ಭಾರತೀಯ ನಾಗರಿಕರ ಕುಂಕುಮ ಕಸಿದ ದುಷ್ಟ ಉಗ್ರಗಾಮಿಗಳನ್ನು ಮಟ್ಟಹಾಕುವಲ್ಲಿ ಮತ್ತು ಪಾಕಿಸ್ತಾನದ ವಿರುದ್ಧ ಸಮರಗೈದು ದಿಟ್ಟತನ ಮೆರೆದ ಸೂಫಿಯಾ ಖುರೇಶಿಯವರ ದೇಶಪ್ರೇಮ ಮುಸ್ಲಿಂ ಸಮುದಾಯದ ನಾಗರಿಕರು ಹೆಮ್ಮೆ ಪಡುವ ಸಂಗತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.