ತುಮಕೂರು: ಸಾಫ್ಟ್ವೇರ್ ಉದ್ಯೋಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ಪಟ್ಟಣದ ದೊಡ್ಡಕೆರೆಯಲ್ಲಿ ನಡೆದಿದೆ.
ಸುಮಾ ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರಿಂಗ್ ಉದ್ಯೋಗಿಯಾಗಿದ್ದು, ಕುಣಿಗಲ್ ತಾಲ್ಲೂಕು ಸೊಬಗಾನಹಳ್ಳಿ ಗ್ರಾಮದ ನಿವಾಸಿಯಾಗಿರುವ ಸುಮಾ, ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಳು.ಸುಮಾ ನಿನ್ನೆ ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಿದ್ದಳು. ಕುಣಿಗಲ್ ದೊಡ್ಡಕೆರೆ ಬಳಿ ಸುಮಾಳ ಬ್ಯಾಗ್, ಮೊಬೈಲ್, ಬಸ್ ನಲ್ಲಿ ಪ್ರಯಾಣಿಸಿದ ಟಿಕೆಟ್ ಹಾಗೂ ಚಪ್ಪಲಿ ಪತ್ತೆಯಾಗಿದೆ.
ಗುರುವಾರ ಕುಣಿಗಲ್ನ ದೊಡ್ಡ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ನಿನ್ನೆಯಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಶೋಧಕಾರ್ಯ ನಡೆಸಿದ್ದರು. ಇಂದು ಬೆಳಗ್ಗೆ ಕೂಡ ಕಾರ್ಯಾಚರಣೆ ನಡೆದು ಶವ ಹೊರ ತಗೆಯಲಾಗಿದೆ.
ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಸಹ ಶೋಧ ಕಾರ್ಯಾಚರಣೆಗೆ ಸಾಥ್ ನೀಡಿದ್ದು , ಲೈಫ್ ಜಾಕೆಟ್ ಧರಿಸಿ ಯುವತಿಯಗಾಗಿ ಶೋಧ ನಡೆಸಿದ್ದರು. ಸದ್ಯ ಯುವತಿಯ ಮೃತದೇಹವನ್ನು ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.