ಬೆಂಗಳೂರು: ಕೆಲವು ಶಕ್ತಿಗಳು ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿಯಲ್ಲಿ ಕೆಲವೆಡೆ ವಿಕಲಚೇತನರನ್ನೂ ಬಳಸಿಕೊಳ್ಳುತ್ತಿದ್ದಾರೆ.
ಸಮರ್ಪಕ ಸಿದ್ಧತೆಯೂ ಇಲ್ಲ. ಆತುರಾತುರವಾಗಿ ಮುಖ್ಯಮಂತ್ರಿಗಳೇ 15 ದಿನದಲ್ಲಿ ಮುಗಿಸಬೇಕೆನ್ನುತ್ತಾರೆ. ಈ ಆತುರ ಯಾಕೆ ಎಂಬುದು ಯಕ್ಷಪ್ರಶ್ನೆ ಎಂದು ಹೇಳಿದರು. ಇನ್ನೂ ಕೆಲವು ಶಕ್ತಿಗಳು ಸಮಾಜ ಒಡೆಯುವ ಕೆಲಸಕ್ಕೂ ಕೈ ಹಾಕಿವೆ. ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. ಹಿಂದೆಯೂ ಇಂಥ ಷಡ್ಯಂತ್ರ, ಪ್ರಯತ್ನ ನಡೆದಿತ್ತು. ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಮುಂದೆಯೂ ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಾವಿಂದು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ. ಧರ್ಮ ಒಡೆಯುವ ದುಸ್ಸಾಹಸವನ್ನೂ ಗಮನಿಸಬೇಕಿದೆ. ಇದರ ಮಧ್ಯೆ ಸಮಾಜ ಒಗ್ಗೂಡಿಸುವ ಕೆಲಸ ಆಗಬೇಕಾಗಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಸಮಾಜ, ಒಕ್ಕಲಿಗ, ವೀರಶೈವ ಲಿಂಗಾಯತ ಸಮಾಜ, ಸೇರಿ ಎಲ್ಲಾ ಸಮಾಜಗಳಲ್ಲಿ ಆರ್ಥಿಕ- ಸಾಮಾಜಿಕ- ಶೈಕ್ಷಣಿಕವಾಗಿ ಹಿಂದುಳಿದವರು ಇದ್ದಾರೆ. ಎಲ್ಲಾ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಆಗಬೇಕಾಗಿದೆ. ಸಿದ್ದರಾಮಯ್ಯನವರಿಗೆ ಆತುರವೇಕೆ ಎಂದು ಪ್ರಶ್ನಿಸಿದರು.