ತುಮಕೂರು:- ಕೆಲ ಅಯೋಗ್ಯ ಕಾಂಗ್ರೆಸ್ಸಿಗರು ದೇಶವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಬೃಹತ್ ತಿರಂಗಾಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕೆಲವು ಅಯೋಗ್ಯರು ದೇಶವಿರೋಧಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಪಹಲ್ಗಾಮ್ನಲ್ಲಿ ಉಗ್ರರ ಅಟ್ಟಹಾಸಕ್ಕೆ 26 ಜನರು ಪ್ರಾಣ ಕಳೆದುಕೊಂಡರು. ಇದರಿಂದಾಗಿ ಉಗ್ರಗಾಮಿ ಸಂಘಟನೆಗಳು, ಪಾಕ್ ವಿರುದ್ಧ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನ ರಕ್ತ ಕುದಿಯುತ್ತಿತ್ತು. `ಆಪರೇಷನ್ ಸಿಂಧೂರ’ದಿಂದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ. ವೀರಯೋಧರು ರಾತ್ರೋರಾತ್ರಿ ದಾಳಿ ನಡೆಸಿದರು. ಕ್ಷಿಪಣಿ ದಾಳಿ ಮಾಡಿ, ಉಗ್ರಗಾಮಿಗಳ ನೆಲೆ ಧ್ವಂಸ ಮಾಡಿದ್ದಾರೆ. ಅಷ್ಟೇ ಅಲ್ಲ ಭಾರತ, ಅಮೆರಿಕಾದ ಹಿಟ್ ಲಿಸ್ಟ್ನಲ್ಲಿದ್ದ ಉಗ್ರಗಾಮಿಗಳನ್ನು ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ ಎಂದರು.
ನಮ್ಮ ವೀರಯೋಧರಿಗೆ ನೈತಿಕ ಸ್ಥೈರ್ಯ ತುಂಬಲು ಈ ತಿರಂಗಯಾತ್ರೆ ಮಾಡುತ್ತಿದ್ದೇವೆ. ಆ ದುಷ್ಟ ಪಾಕಿಸ್ತಾನಕ್ಕೆ ಮೋದಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ. ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಅಂದಿದ್ದಾರೆ. ಸಿಂಧೂ ನದಿ ನೀರು ಬೇಕಾದರೆ ಭಾರತದಲ್ಲಿ ಹರಿಯುತ್ತಿರುವ ರಕ್ತ ನಿಲ್ಲಿಸಬೇಕಾಗಿದೆ. ಪಾಕಿಸ್ತಾನ ಸರ್ವನಾಶ ಮಾಡಲು ಭಾರತ ಹೆದರುವುದಿಲ್ಲ ಎಂದು ಹೇಳಿದ್ದರು. ರಾಷ್ಟ್ರ ರಕ್ಷಣೆಗಾಗಿ ನಾಗರಿಕರಿಂದ ತಿರಂಗಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ತುಮಕೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎನ್ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ದೇಶ ಭಕ್ತರು ಸೇರಿ ತಿರಂಗಯಾತ್ರೆ ಯಶಸ್ವಿಯಾಗಿಸಿದ್ದಾರೆ.
ರಾಜಕೀಯ ಕಾರಣಕ್ಕೆ ತಿರಂಗಯಾತ್ರೆ ಮಾಡುತ್ತಿಲ್ಲ. ಸೈನಿಕರಿಗೆ ನೈತಿಕ ಬೆಂಬಲ ನೀಡುವಂತೆ ಇಡೀ ರಾಷ್ಟ್ರದಲ್ಲಿ ಜಾಗೃತಿಗೊಳಿಸಬೇಕೆಂದು ಮಾಡುತ್ತಿದ್ದೇವೆ. ಭಾರತದಲ್ಲಿದ್ದೂ ಶತ್ರು ರಾಷ್ಟ್ರಕ್ಕೆ ಸಪೋರ್ಟ್ ಮಾಡುವ ತುಂಬಾ ಜನರಿದ್ದಾರೆ. ರಾಜ್ಯಸಭಾ ಚುನಾವಣಾ ವೇಳೆ ವಿಧಾನಸೌಧದ ಒಳಗಡೆ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ. ಅಂಥಹ ದೇಶದ್ರೋಹಿಗಳನ್ನು ಹುಡುಕುವ ಕೆಲಸ ಆಗಬೇಕಿದೆ. ನರೇಂದ್ರ ಮೋದಿಯವರು ಆ ಕೆಲಸ ಮಾಡಿಯೇ ಮಾಡುತ್ತಾರೆ. ನಮ್ಮ ತಿರಂಗಯಾತ್ರೆ ಪಕ್ಷದ್ದಲ್ಲ, ಇದಕ್ಕೆ ರಾಜಕಾರಣ ಮಾಡಬಾರದು. ಬಿಜೆಪಿ ಪಕ್ಷದ ಬಾವುಟ, ಶಲ್ಯ ಇದರಲ್ಲಿ ಕಾಣ ಸಿಗುವುದಿಲ್ಲ. ಇದು ಪಕ್ಷಾತೀತ ತಿರಂಗಯಾತ್ರೆ ಎಂದು ಹೇಳಿದರು.