ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಅದರಂತೆ ಇಲ್ಲೋರ್ವ ಮಗ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಘಟನೆ ಜರುಗಿದೆ.
ನಗರದ ಎಂಟನೇ ಹಂತದ ವೃದ್ಧಾಶ್ರಮದಲ್ಲಿ ಘಟನೆ ನಡೆದಿದೆ. 81 ವರ್ಷದ ಕೃಷ್ಣಮೂರ್ತಿ, 74 ವರ್ಷದ ರಾಧ ಆತ್ಮಹತ್ಯೆಗೆ ಶರಣಾದ ದಂಪತಿ. ಮನೆಯಲ್ಲಿ ಸೊಸೆ ಮಾಡಿದ ಅಡುಗೆ ಚೆನ್ನಾಗಿರಲ್ಲ ಎಂಬ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ವಯಸ್ಸಾದ ತಂದೆ ತಾಯಿಯನ್ನು ಮಗ ಕಳೆದ ತಿಂಗಳು ವೃದ್ಧಾಶ್ರಮಕ್ಕೆ ಸೇರಿಸಿದ್ದ. ಇದರಿಂದ ನೊಂದ ವೃದ್ಧ ದಂಪತಿ ಸೋಮವಾರ ರಾತ್ರಿ ವೃದ್ಧಾಶ್ರಮದಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಂಗಳವಾರ ಬೆಳಗಿನ ಜಾವ ದಂಪತಿ ಬಾಗಿಲು ತೆಗೆದಿರಲಿಲ್ಲ. ಅನುಮಾನಗೊಂಡ ಆಶ್ರಮದವರು ಬಾಗಿಲು ತೆಗೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.