ಹುಬ್ಬಳ್ಳಿ:- ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಆಸ್ತಿಗಾಗಿ ಹೆತ್ತ ತಂದೆ ಹಾಗೂ ಮಲತಾಯಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಮಗ ಬರ್ಬರವಾಗಿ ಹತ್ಯೆಗೈದ ಘಟನೆ ಜರುಗಿದೆ.
ಅಶೋಕ, ಶಾರದಮ್ಮ ಮೃತರು. ಆರೋಪಿ ಗಂಗಾಧರಪ್ಪ ನಿಂದ ಈ ಕೃತ್ಯ ನಡೆದಿದೆ. ಮೃತ ಅಶೋಕನ ಮೊದಲ ಹೆಂಡತಿಯ ಮಗ ಗಂಗಾಧರಪ್ಪ ಬಾಗಲಕೋಟೆ ಜಿಲ್ಲೆಯ ಬೀಳಿಗಿಯಲ್ಲಿ ವಾಸಿಸುತ್ತಿದ್ದ. ಎರಡು ಎಕರೆ ಆಸ್ತಿಗಾಗಿ ಆಗಾಗ ತಂದೆ ಮತ್ತು ಮಗನ ನಡುವೆ ಜಗಳ ನಡೆಯುತ್ತಿತ್ತು. ಇಂದು ಕೂಡ ಆರೋಪಿ ಮನೆಗೆ ಕುಡಿದು ಬಂದು ತಂದೆ ಜೊತೆ ಜಗಳ ಮಾಡಿದ್ದ. ಮನೆಗೆ ಬಂದು ಆಸ್ತಿ ಬರೆದುಕೊಡುವಂತೆ ಒತ್ತಾಯಿಸಿದ್ದ. ಈ ವೇಳೆ ತಂದೆ ಆಸ್ತಿ ಕೊಡಲು ನಿರಾಕರಿಸಿದ್ದರು. ಈ ಹಿನ್ನೆಲೆ ಮಾರಕಾಸ್ತ್ರಗಳಿಂದ ಕೊಚ್ಚಿ ತಂದೆ ಹಾಗೂ ಮಲತಾಯಿಯ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ