ಗಾಯಕ ಸೋನು ನಿಗಂ ಕನ್ನಡಿಗರ ಬಗ್ಗೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಸೋನು ನಿಗಂ ಮೇಲೆ ಕೆಲ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದು ಕ್ರಮಕ್ಕೆ ಒತ್ತಾಯಿಸಿವೆ. ಇದೀಗ ಬೆಂಗಳೂರು ಪೊಲೀಸರು ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೋನು ನಿಗಂಗೆ ನೋಟಿಸ್ ಜಾರಿ ಆಗಿದೆ..
ಇದರ ಬೆನ್ನಲ್ಲೇ ಸೋನು ನಿಗಮ್ ಬ್ಯಾನ್ ವಿಚಾರವಾಗಿ ಇಂದು ಫಿಲ್ಮ್ ಚೇಂಬರ್ನಲ್ಲಿ ಪದಾಧಿಕಾರಿಗಳು, ಸಂಗೀತ ನಿರ್ದೇಶಕರು, ಗಾಯಕರು, ನಿರ್ಮಾಪಕರ ಸಭೆ ನಡೆಸಲಾಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಲಾಯಿತು.
ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಸೋನು ನಿಗಮ್ಗೆ ತಾತ್ಕಾಲಿಕ ನಿರ್ಬಂಧ ಏರಲು ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಅಂದ್ರೆ ಸೋನು ನಿಗಮ್ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ.
ಕನ್ನಡ.. ಕನ್ನಡ ಎಂದವರನ್ನು ಪಹಲ್ಗಾಮ್ಗೆ ಹೋಲಿಸಿದ್ದಕ್ಕೆ ಸೋನು ನಿಗಮ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಕನ್ನಡಿಗರ ಭಾವನೆ ಮತ್ತು ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಮಣಿದಿರುವ ಫಿಲ್ಮ್ ಚೇಂಬರ್ ಕ್ಷಮೆ ಕೇಳೋತನಕ ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವ ನಿರ್ಧಾರ ಮಾಡಿದೆ. ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡಿ, ಸೋನು ನಿಗಮ್ ಕನ್ನಡಿಗರ ಕ್ಷಮಾಪಣೆ ಕೇಳೋ ತನಕ ಹತ್ತಿರ ಸೇರಿಸಲ್ಲ. ಇಂದಿನ ಸಭೆಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಸೋನು ನಿಗಮ್ ಅವರು ಕ್ಷಮಾಪಣೆ ಕೇಳೋ ತನಕ ಬಿಡಲ್ಲ ಎಂದಿದ್ದಾರೆ.