ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿ (ಎಂ.ಸಿ.ಪಿ.ಸಿ), ಸರ್ವೋಚ್ಛ ನ್ಯಾಯಾಲಯದೊಂದಿಗೆ ವಿಶೇಷ ಮಧ್ಯಸ್ಥಿಕೆ ಅಭಿಯಾನ ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಚರಣೆಯನ್ನು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅಧ್ಯಕ್ಷರು, ಎಂ.ಸಿ.ಪಿ.ಸಿ ಹಾಗೂ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಪ್ರಧಾನ ಪೋಷಕರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ ಮಧ್ಯಸ್ಥಿಕೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕಾರ್ಯಾಚರಣೆ ಮೂಲಕ ಉಚ್ಛ ನ್ಯಾಯಾಲಯಗಳು ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಪ್ರಕ್ರಿಯೆ ಜುಲೈ 1ರಿಂದ ಅಕ್ಟೋಬರ್ 6ರವರೆಗೆ ಹಮ್ಮಿಕೊಂಡಿತ್ತು.
ರಾಷ್ಟ್ರಕ್ಕಾಗಿ ವಿಶೇಷ ಅಭಿಯಾನದಡಿ ಗದಗ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳ ಮಧ್ಯಸ್ಥಿಕೆ ಕೇಂದ್ರಕ್ಕೆ ಬಂದ ಒಟ್ಟು 1379 ಪ್ರಕರಣಗಳಲ್ಲಿ 123 ಪ್ರಕರಣ ಇತ್ಯರ್ಥಗೊಂಡಿವೆ ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಗಂಗಾಧರ ಸಿ.ಎಂ. ತಿಳಿಸಿದರು.
90 ದಿನಗಳ ಮಧ್ಯಸ್ಥಿಕೆಯ ರಾಷ್ಟ್ರಕ್ಕಾಗಿ ವಿಶೇಷ ಅಭಿಯಾನದಲ್ಲಿ 375 ವೈವಾಹಿಕ ವಿವಾದಗಳಲ್ಲಿ 288 ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಬಂದಿದ್ದು, ಇವುಗಳ ಪೈಕಿ 6 ಪ್ರಕರಣಗಳು ಇತ್ಯರ್ಥವಾಗಿವೆ. 271 ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ 45 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, 7 ಪ್ರಕರಣಗಳು ಇತ್ಯರ್ಥವಾಗಿವೆ. ಚೆಕ್ ಬೌನ್ಸ್ನ 2701 ಪ್ರಕರಣಗಳಲ್ಲಿ 309 ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 41 ಪ್ರಕರಣಗಳು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥವಾಗಿವೆ. 295 ಕ್ರಿಮಿನಲ್ ಕಾಂಪೌಂಡೇಬಲ್ ಪ್ರಕರಣಗಳಲ್ಲಿ 75 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 12 ಪ್ರಕರಣಗಳು ಸಂಧಾನವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಗದಗ ಜಿಲ್ಲೆಯಾದ್ಯಂತ ಈ ಅಭಿಯಾನದಲ್ಲಿ ಒಟ್ಟು 123 ಪ್ರಕರಣಗಳು ರಾಜೀ ಮೂಲಕ ಇತ್ಯರ್ಥಗೊಂಡಿರುತ್ತವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್. ಶಿವನಗೌಡ್ರ ತಿಳಿಸಿದ್ದಾರೆ.
ಸಾಲ ವಸೂಲಾತಿಯ 478 ಪ್ರಕರಣಗಳಲ್ಲಿ 17 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 2 ಪ್ರಕರಣಗಳು ಇತ್ಯರ್ಥವಾಗಿವೆ. 2603 ಪಾಲುವಾಟಿನ ವ್ಯಾಜ್ಯಗಳಲ್ಲಿ 293 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, ಅದರಲ್ಲಿ 33 ಪ್ರಕರಣಗಳು ಇತ್ಯರ್ಥವಾಗಿವೆ. ಇತರೆ 4214 ಸಿವಿಲ್ ವ್ಯಾಜ್ಯಗಳಲ್ಲಿ 336 ಪ್ರಕರಣಗಳು ಮಧ್ಯಸ್ಥಿಕೆಗೆ ಬಂದಿದ್ದು, 22 ಪ್ರಕರಣಗಳು ಸಂಧಾನಗೊಂಡಿವೆ.



