ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಅಕ್ರಮ ಗಾಂಜಾ ಮಾರಾಟದ ಹಾವಳಿ ಹೆಚ್ಚಾಗಿತ್ತು. ಇದರಿಂದ ಯುವಕರು ಗಾಂಜಾ ಚಟಕ್ಕೆ ಮಾರುಹೋಗಿ ಅನೇಕ ಸಮಾಜದ್ರೋಹಿ ಕೆಲಸದಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆಯೂ ಸೇರಿದಂತೆ ಒಟ್ಟೂ 6 ಜನರನ್ನು ಬಂಧಿಸಿ 6.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಗಾಂಜಾ ಮಾರಾಟ ಮತ್ತು ಸಾಗಾಟಗಾರರಿಗೆ ಬಲೆ ಬೀಸಿ, ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್ಐಗಳಾದ ಎ.ಆರ್. ರಾಮೇನಹಳ್ಳಿ, ಎಸ್.ಬಿ. ಕವಲೂರ, ಸಿಬ್ಬಂದಿಗಳಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನಿಲ ಬನ್ನಿಕೊಪ್ಪ, ಗಂಗಾಧರ ಮಜ್ಜಗಿ, ರಾಜಮಹ್ಮದ ಅಲಮದಾರ, ಹೇಮಂತ ಪರಸಣ್ಣವರ, ಲಕ್ಷ್ಮಣ ಪೂಜಾರ, ಪ್ರವೀಣ ಶಾಂತಪ್ಪನವರ, ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ತನಿಖೆ ಚುರುಕುಗೊಳಿಸಿದ್ದ ತಂಡ ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಂದಾಜು 6.7 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅಂದಾಜು 6 ಲಕ್ಷ 70 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2025 ಕಲಂ 20(ಎ) ಎನ್ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಆಧುನಿಕ, ಅಗತ್ಯ ತಂತ್ರಾಂಶ ಮತ್ತು ತಮ್ಮ ಕೌಶಲ್ಯದಿಂದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಆರೋಪಿಗಳನ್ನು ಚಾಣಾಕ್ಷತನದಿಂದ ಬಂಧಿಸಿ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಗಾಂಜಾ ಪೂರೈಕೆ ಆಗುತ್ತಿರುವ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದ್ದು, ಒಟ್ಟಾರೆಯಾಗಿ ಆರೋಪಿತರಿಂದ ಒಂದು ಬೈಕ್, 6 ಮೊಬೈಲ್ ಫೋನುಗಳು, 1 ಸಾವಿರ ರೂ ನಗದು ಹಣ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಎಸ್.ಪಿ ಬಿ.ಎಸ್ ನೇಮಗೌಡ ತಿಳಿಸಿದರು.
ಬಂಧಿತ ಆರೋಪಿಗಳು
* ಬಾಪು ಪುಣಜಪ್ಪ ಹರಣಸಿಕಾರಿ,
* ಚಂದಪ್ಪ ತಂದೆ ಪುಣಜಪ್ಪ ಹರಣಸಿಕಾರಿ
* ಗಾಯಿತ್ರಿ ಕೋಂ ಮಾರುತಿ ಕಾಳೆ
* ಮಾರುತಿ ಶೇಖಪ್ಪ ಕಾಳೆ
* ಗೋಪಾಲ ರಾಮಚಂದ್ರ ಬಸವಾ
* ಕಲ್ಯಾಣಬಾಬು ಚಿನ್ನನಾಗು ಶಿಕಾರಿ