ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗನಗೌಡ ಜಿ.ಪಾಟೀಲ (ಮಿಥುನ್)ರವರ 48ನೇ ಜನ್ಮದಿನದ ನಿಮಿತ್ತ ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಸೇಲ್ಸ್ ಸೊಸೈಟಿ ಆವರಣದಲ್ಲಿ ಜ.10ರಿಂದ 13ರವರೆಗೆ ಪ್ರೋ ಕಬಡ್ಡಿ ವೈಭವ ನಡೆಯಲಿದೆ ಎಂದು ತಾಲೂಕಾ ಯುವ ಕಾಂಗ್ರೆಸ್ ಅಧ್ಯಕ್ಷ ಮುತ್ತು ನವಲಗುಂದ ಹೇಳಿದರು.
ಅವರು ಗುರುವಾರ ಪಿಡಬ್ಲುಡಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,
ಜ. 10ರಿಂದ 13ರವರೆಗೆ ನಡೆಯಲಿರುವ ಕಬಡ್ಡಿ ಪಂದ್ಯಗಳನ್ನು ವೀಕ್ಷಿಸಲು 4 ಸಾವಿರ ಜನರಿಗೆ ಗ್ಯಾಲರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪಂದ್ಯ ಆರಂಭಗೊಳ್ಳುವ ದಿನದಂದು ಬೆಂಗಳೂರು ಬುಲ್ಸ್ ತಂಡದ ಆಟಗಾರ ಗಣೇಶ ಹನ್ಮಂತಗೌಡ ಆಗಮಿಸಲಿದ್ದು, ಅಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಸಿದ್ಧಾರೂಡ ಮಠದಿಂದ ಟ್ರೋಫಿಗಳ ಮೆರವಣಿಗೆ ನಡೆಯಲಿದೆ. ಸಂಜೆ 4ಕ್ಕೆ ಪಂದ್ಯಗಳ ಉದ್ಘಾಟನೆ ನಡೆಯಲಿದೆ ಎಂದರು.
ಯುವ ಮುಖಂಡ ಅಭಿಷೇಕ ನವಲಗುಂದ ಮಾತನಾಡಿ, ಕಬಡ್ಡಿ ಪಂದ್ಯಾವಳಿಗಳು ಅತ್ಯಂತ ವಿಶೇಷವಾಗಿದ್ದು, ಆಹ್ವಾನಿತ ನಾಲ್ಕು ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಅಲ್ಲದೆ ಜ. 12ರಂದು ಸಂಜೆ ಇದೇ ಸ್ಥಳದಲ್ಲಿ ಮಹಿಳಾ ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಜ. 9ರಂದು ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಮಾರ ಗಡಗಿ, ಗೋಪಿ ರಾಯನಗೌಡ್ರ, ಬಸವರಾಜ ಹೊಸಳ್ಳಿ, ರಿಯಾಜ ಮುಲ್ಲಾ, ಅಬ್ಬು ಮುಲ್ಲಾ, ಸತೀಶ ಮುಂತಾದವರು ಉಪಸ್ಥಿತರಿದ್ದರು.
ಸೋಮು ನಾಗರಾಜ ಮಾತನಾಡಿ, ಜ. 13ರಂದು ಸಮಾರೋಪ ಸಮಾರಂಭ ಜರುಗಲಿದೆ. ಅಂದು ಬೆಂಗಳೂರು ಬುಲ್ಸ್ ತಂಡದ ಇನ್ನೋರ್ವ ಆಟಗಾರ ಸತ್ಯಪ್ಪ ಮಟ್ಟಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಭಾಗವಹಿಸಲಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ ಸೇವೆ ಸಲ್ಲಿಸಿ ಬಂಗಾರದ ಪದಕ ಪಡೆದಿರುವ ಸಿಬ್ಬಂದಿಗಳಿಗೆ, 108 ಅಂಬ್ಯುಲೆನ್ಸ್ ವಾಹನ ಚಾಲಕರಿಗೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮಹನೀಯರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ತಾಲೂಕಿನ ಜನತೆ ಸೇರಿದಂತೆ ಮತಕ್ಷೇತ್ರದ ಜನರು ಕಬಡ್ಡಿ ವೈಭವದಲ್ಲಿ ಪಾಲ್ಗೊಳ್ಳಬೇಕು ಎಂದರು.



