ವಿಜಯಸಾಕ್ಷಿ ಸುದ್ದಿ, ಮುಳಗುಂದ: ಎಲ್ಲರಿಗೂ ಶಾಂತಿ-ನೆಮ್ಮದಿ, ಉತ್ತಮ ಸಂಸ್ಕಾರ, ಉತ್ತಮ ಆರೋಗ್ಯ ಲಭಿಸಬೇಕಾದರೆ ಆಧ್ಯಾತ್ಮಿಕ ಚಿಂತನ-ಮಂಥನ ಮೈಗೂಡಿಸಿಕೊಳ್ಳಬೇಕು. ಇದರಿಂದ ಧನಾತ್ಮಕ ವಿಚಾರಗಳು ಉತ್ಪತ್ತಿಯಾಗುತ್ತವೆ ಎಂದು ಗದಗ ಸಿಪಿಐ ಪರಮೇಶ ಕವಟಗಿ ಹೇಳಿದರು.
ಅವರು ಪಟ್ಟಣದ ಸಮೀಪದ ನೀಲಗುಂದ ಗ್ರಾಮದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿವರಾತ್ರಿ ಉತ್ಸವ ಜಾಗರಣೆ ಸಮಾರಂಭದಲ್ಲಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಗಳನ್ನು ಆಲಿಸುವುದರಿಂದ ಬದುಕಿನ ಅರ್ಥ ತಿಳಿಯುತ್ತದೆ. ಸಂತರು, ಶರಣರು ತಮ್ಮ ಬದುಕಿನುದ್ದಕ್ಕೂ ನುಡಿದಂತೆ ನಡೆದವರು. ಆ ಹಾದಿಯಲ್ಲಿ ಪ್ರಭುಲಿಂಗ ದೇವರು ಶಾಲೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಮಟ್ಟದ ಬಡ ಮಕ್ಕಳಿಗೆ ಆಶಾ ಕಿರಣವಾಗಿ ನಿಂತಿರುವುದು ಶ್ಲಾಘನೀಯ ಎಂದರು.
ದ್ರಾಕ್ಷಾಯಣಿ ಅಳವಂಡಿ ಮಾತನಾಡಿ, ಶಿವರಾತ್ರಿ ಉತ್ಸವ ಮಾಡುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಜ್ಞಾನಾಭಿವೃದ್ಧಿ ಬೆಳಕನ್ನು ಬಿತ್ತುವ ಕಾರ್ಯ ಶ್ಲಾಘನೀಯವಾದುದು ಎಂದರು.
ಸಾನ್ನಿಧ್ಯವನ್ನು ಬೆಳಟ್ಟಿ ರಾಮಲಿಂಗೇಶ್ವರಮಠದ ಬಸವರಾಜ ಮಾಹಾಸ್ವಾಮಿಗಳು ವಹಿಸಿದ್ದರು. ಎಂ.ಡಿ. ಬಟ್ಟೂರ, ಅಪ್ಪಣ್ಣಾ ಇನಾಮತಿ, ಗೌರಮ್ಮಾ ಬಡ್ನಿ, ಡಾ. ಎಸ್. ಚವಡಿ ವೇದಿಕೆಯಲ್ಲಿದ್ದರು.