ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆಧ್ಯಾತ್ಮಿಕ ಪುರಾಣ-ಪ್ರವಚನಗಳು ಪ್ರತಿಯೊಬ್ಬರಿಗೂ ಜೀವನ ವಿಕಾಸಕ್ಕೆ ದಾರಿ ತೋರಬಲ್ಲವು. ಪ್ರವಚನ ಆಲಿಸುವುದರಿಂದ ಜೀವನದಲ್ಲಿ ನೆಮ್ಮದಿ ಲಭಿಸುವ ಮಾರ್ಗದರ್ಶನ ಸಿಗುತ್ತದೆ ಎಂದು ನೆಗಳೂರಿನ ಸಂಸ್ಥಾನ ಹಿರೇಮಠದ ಪೂಜ್ಯ ಗುರುಶಾಂತೇಶ್ವರ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಬೈರಾಪುರ ಗ್ರಾಮದಲ್ಲಿ ನೆಗಳೂರ ಸಂಸ್ಥಾನ ಹಿರೇಮಠದ ನೂತನ ಮಹಾರಥ ಲೋಕಾರ್ಪಣೆ ಹಾಗೂ ಜಾತ್ರಾಮಹೋತ್ಸವ ನಿಮಿತ್ತ ಜರುಗುತ್ತಿರುವ ಪರಿವರ್ತನೆಯೆಡೆಗೆ ಧರ್ಮಜಾಗೃತಿ ಪ್ರವಚನ ಕಾರ್ಯಕ್ರಮದ 9ನೇ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಪ್ರವಚನ ಆಲಿಸುವುದರಿಂದ ನಮ್ಮ ಅಂತರಂಗ ಪರಿಶುದ್ಧವಾಗುತ್ತದೆ. ಅದಕ್ಕಾಗಿ ಮಹಾತ್ಮರೆಲ್ಲರೂ ಸಹ ಸಂಸಾರದಲ್ಲಿದ್ದುಕೊಂಡೇ ಸಂಸಾರದ ಕಡೆಗೆ ಒಲವು ಹೊಂದಿ ಆಧ್ಯಾತ್ಮದ ಮಹಾ ಬೆಳಕಲ್ಲಿ ನೆಮ್ಮದಿಯ ಬದುಕು ಸಾಗಿಸಿದರು. ಅಂತಹ ಬದುಕು ಎಲ್ಲರದ್ದಾಗಬೇಕು ಎಂದರು.
ಪ್ರವಚನಕಾರ ಡಾ. ಗುರುಮಹಾಂತಯ್ಯ ಶಾಸ್ತ್ರಿ ಮಾತನಾಡಿ, ಸಂತ ಮಹಾತ್ಮರ ಜೀವನಚರಿತ್ರೆ ಆಧಾರಿತ ಪ್ರವಚನ ಕೇಳುವುದರಿಂದ ಮನಸ್ಸಿಗೆ ಅಂಟಿದ ದುರಾಲೋಚನೆಗಳು ದೂರವಾಗಿ ಬದುಕು ಹಸನಾಗುವುದು. ಆ ನಿಟ್ಟಿನಲ್ಲಿ ನೆಗಳೂರಿನ ಶ್ರೀಗಳು ಕಳೆದ ಒಂದೂವರೆ ತಿಂಗಳಿನಿಂದ ಆಯ್ದ ಗ್ರಾಮಗಳಲ್ಲಿ ಪ್ರವಚನ ಆಯೋಜಿಸಿ ಸದ್ಭಕ್ತರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸದ್ಭಾವನಾ ಪಾದಯಾತ್ರೆ, ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಅಭಿಯಾನ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರೇಮರಳಿಹಳ್ಳಿಯ ಷಣ್ಮುಖಪ್ಪ ಕಮ್ಮಾರ ತಬಲಾ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಬೈರಾಪುರ, ಇಚ್ಚಂಗಿ, ಕಲಿವಾಳ, ನೆಗಳೂರ ಗ್ರಾಮಸ್ಥರು ಭಾಗಿಯಾಗಿದ್ದರು.



