ವಿಜಯಸಾಕ್ಷಿ ಸುದ್ದಿ, ಮುಳಗುಂದ: ಮಕ್ಕಳ ಸಮಗ್ರ ಅಭಿವೃದ್ಧಿಗೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿದೆ ಎಂದು ದೈಹಿಕ ಶಿಕ್ಷಕ ವಿ.ಟಿ. ಅಂಗಡಿ ಹೇಳಿದರು.
ಅವರು ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಿದ್ದೇಶ್ವರ ಯುವಕ ಮಂಡಳ, ಡಿಪಿಇಪಿ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಬೇಸಿಗೆ ಕ್ರೀಡಾ ತರಬೇತಿ ಸಮಾರಂಭ ಹಾಗೂ ದಾವಲಸಾಬ ಯಳವತ್ತಿ ಅವರು ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕವಾಗಿದೆ. ಪ್ರತಿಯೊಂದು ಮಗುವೂ ತನ್ನದೇ ಆದ ಕ್ರೀಡಾಶಕ್ತಿ ಹೊಂದಿರುತ್ತದೆ. ಅದನ್ನು ಗುರುತಿಸಿ ಕ್ರೀಡೆಯಲ್ಲಿ ಭಾಗವಹಿಸುವುದು ಅವಶ್ಯವಾಗಿದೆ ಎಂದರಲ್ಲದೆ, ದಾವಲಸಾಬ ಯಳವತ್ತಿ ಅವರು 12 ಜೊತೆ ಸಮವಸ್ತç ನೀಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಡಿಪಿಇಪಿ ಶಾಲೆಯ ಅಧ್ಯಕ್ಷ ಮಾಹಾಂತೇಶ ಕೆಂಚನಾಯಕರ ಮಾತನಾಡಿ, ಇಂದು ಆಧುನಿಕ ತಂತ್ರಜ್ಞಾನ ಬೆಳೆದಂತೆ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಕಡಿಮೆಯಾಗುತ್ತಿದ್ದು, ಇದರಿಂದ ಮಕ್ಕಳ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತಿದೆ. ಮಕ್ಕಳು ದೈಹಿಕವಾಗಿ ಸದೃಢರಾಗಲು, ಚೈತನ್ಯಶೀಲರಾಗಿರಲು, ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದ್ದು, ಕ್ರೀಡಾ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಿದಾಗ ಮಕ್ಕಳು ಉಜ್ವಲ ಭವಿಷ್ಯ ಹೊಂದಲು ಸಾಧ್ಯವಾಗುತ್ತದೆ ಎಂದರು.
ದಾವಲಸಾಬ ಯಳವತ್ತಿ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಕ್ರೀಡೆಯಲ್ಲಿ ಮಕ್ಕಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು ಎಂದರು.
ದೈಹಿಕ ಶಿಕ್ಷಕ ವಿ.ಟಿ. ಅಂಗಡಿ. ರಮೇಶ ಲಮಾಣಿ, ದಾವಲಸಾಬ ಯಳವತ್ತಿ, ಮಾಹಾಂತೇಶ ಕೆಂಚನಾಯ್ಕರ್, ಬಸವರಾಜ ಗೌರಿಮನಿ, ಪಂಪನಗೌಡ ನಾಯಕ್, ರವಿ ಗುಂಜಳ, ವಿ.ಡಿ. ಸಿದ್ದನಗೌಡರ ಇದ್ದರು.