ವಿಜಯಸಾಕ್ಷಿ ಸುದ್ದಿ, ಗದಗ : ಕನಸಿನಲ್ಲಿ ಕಂಡದ್ದನ್ನೂ ಲೀಲಾಜಾಲವಾಗಿ ಐತಿಹಾಸಿಕ, ಪೌರಾಣಿಕ ಪುರಾಣಗಳನ್ನು ಬರೆಯಿಸಿಕೊಂಡಿದ್ದು ಇಡೀ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಶ್ರೀದೇವಿ ಪುರಾಣವಾಗಿದೆ. ಈ ಪುರಾಣವನ್ನು ಚಿದಾನಂದವಧೂತರು ತಪಸ್ಸಿಗೆ ಕುಳಿತುಕೊಂಡು ಬರೆದಿದ್ದು, ಅದೊಂದು ಅವಿಸ್ಮರಣೀಯ ಪೌರಾಣಿಕ ಪುರಾಣ ಗ್ರಂಥ. ಈ ಗ್ರಂಥ ಜನರಲ್ಲಿ ದೈವೀಶಕ್ತಿಯನ್ನು ತುಂಬಿಕೊಡುತ್ತಿದ್ದು, ಆ ಮೂಲಕ ಸಂಸ್ಕಾರಯುತ ಬದುಕಿಗೆ ನೆರವಾಗಿದೆ ಎಂದು ಪರಮಪೂಜ್ಯ ಕಲ್ಲಯ್ಯಜ್ಜನವರು ನುಡಿದರು.
ಗದುಗಿನ ರೇಲ್ವೆ ಕ್ವಾರ್ಟ್ರಸ್ ಆವರಣದಲ್ಲಿ ಶ್ರೀ ಬನ್ನಿ ಮಹಾಕಾಳಿ ದೇವಸ್ಥಾನದಲ್ಲಿ ಘಟಸ್ಥಾಪನೆ ಹಾಗೂ ಶ್ರೀ ದೇವಿ ಪುರಾಣ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡುತ್ತಿದ್ದರು.
ಮಕ್ಕಳಲ್ಲಿ ಇಂದು ಮೊಬೈಲ್ ಗೀಳು ಹೆಚ್ಚುತ್ತಿದ್ದು, ಭವಿಷ್ಯದಲ್ಲಿ ಅಪಾಯ ತಂದೊಡ್ಡುವ ಭೀತಿಯಿದೆ.
ಬಾಲ್ಯದಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡುವ ದೊಡ್ಡ ಜವಾಬ್ದಾರಿ ಪಾಲಕರ ಮೇಲಿದ್ದು, ಪುರಾಣ ಪುಣ್ಯ ಕಥೆಯಲ್ಲಿ ಮಕ್ಕಳೊಂದಿಗೆ ಭಾಗವಹಿಸಿದರೆ ಮಕ್ಕಳಲ್ಲಿ ಸಂಸ್ಕಾರ ಗುಣಗಳು ಬೆಳೆಯುವುದನ್ನು ಕಾಣುತ್ತೀರಿ.
‘ಹರ ಮತ್ತು ಗುರುವಿನ’ ನಡುವಿನ ಹಾಗೂ ‘ಹಣ ಹಾಗೂ ಗುಣ’ ಇವುಗಳ ನಡುವಿನ ಅಂತರವನ್ನು ಅತ್ಯಂತ ಮಾರ್ಮಿಕವಾಗಿ ವಿಶ್ಲೇಷಣೆ ಮಾಡಿದರು.
ಇದಕ್ಕೂ ಮೊದಲು ಸಮಾರಂಭದ ಸಾನ್ನಿಧ್ಯ ವಹಿಸಿದ ಪ. ಪೂ. ಶ್ರೀ ಮ. ಘ. ಚ. ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಈ ಆವರಣದಲ್ಲಿ ನಡೆಯಲಿರುವ ಶ್ರೀದೇವಿ ಪುರಾಣ ಯಶಸ್ವಿಯಾಗಲಿ ಎಂದು ಹರಸಿದರು.
ನಿವೃತ್ತ ಪ್ರಾಚಾರ್ಯ ಯಲಬುರ್ಗಿಯವರು ಸ್ವಾಗತಿಸಿದರೆ, ನಾಗರಾಜ ಮೆಣಸಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಪೂಜ್ಯ ಕಲ್ಲಯ್ಯಜ್ಜನವರು ಪುರಾಣಿಕರಾಗಿ ಆಗಮಿಸಿದ್ದ ಹೇಮರಾಜಶಾಸ್ತ್ರಿ ಹಿರೇಮಠ, ವಾರ್ಡ್ ನಂ. 13ರ ಸದಸ್ಯ ಮುತ್ತು ಮುಶಿಗೇರ, ಓಣಿಯ ಹಿರಿಯರು ಸೇರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ವಿಶೇಷ ಭಕ್ತಿ ಕಾಣಿಕೆ ನೀಡಿದ ಭಕ್ತರನ್ನು ಸನ್ಮಾನಿಸಿದರು. ಪ್ರೊ. ಜಿ.ಎಸ್. ಮಠಪತಿ ಕಾರ್ಯಕ್ರಮ ನಿರೂಪಿಸಿದರು.