ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು: ಕೆ.ಆರ್. ನಗರ ತಾಲೂಕಿನ ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಮ್ಮ 69ನೇ ವಯಸ್ಸಿನಲ್ಲಿ ಹಠಾತ್ತಾಗಿ ಹೃದಯಾಘಾತದಿಂದ ಶಿವೈಕ್ಯರಾಗಿರುವುದಕ್ಕೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದರು.
ಶ್ರೀ ರಂಭಾಪುರಿ ಜಗದ್ಗುರುಗಳು ಸೋಮವಾರ ಕರ್ಪೂರವಳ್ಳಿ ಜಂಗಮ ಮಠಕ್ಕೆ ಭೇಟಿ ನೀಡಿ ಚಂದ್ರಶೇಖರ ಶ್ರೀಗಳ ಸಮಾಧಿ ಶ್ರದ್ಧಾಂಜಲಿ ಸಮಾರಂಭದ ಸಾನ್ನಿಧ್ಯ ವಹಿಸಿ ಶಾಂತಿ ಸಂದೇಶ ಅನುಗ್ರಹಿಸಿದರು.
ಶ್ರೀಗಳು ಧಾರ್ಮಿಕ ಶೈಕ್ಷಣಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಕರ್ಪೂರವಳ್ಳಿ ಜಂಗಮ ಮಠವು ಶ್ರೀ ರಂಭಾಪುರಿ ಪೀಠದ ಶಾಖಾ ಮಠವಾಗಿದ್ದು, ಅವರ ಉತ್ತರಾಧಿಕಾರಿ ನೇಮಕದ ಬಗ್ಗೆ ತಮ್ಮೊಂದಿಗೆ ಇತ್ತೀಚೆಗೆ ಚರ್ಚಿಸಿ ದೃಢಪಡಿಸಿದ್ದರು. ಶ್ರೀಗಳು ಶ್ರೀ ರಂಭಾಪುರಿ ಪೀಠದ ಮೇಲೆ ಅಪಾರ ಅಭಿಮಾನ ಹೊಂದಿದವರಾಗಿದ್ದು, ಶ್ರೀ ಪೀಠದ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ವೀರಶೈವ-ಗುರು ಪೀಠ ಪರಂಪರೆಯಂತೆ ಅವರ ಕ್ರಿಯಾ ಸಮಾಧಿ ಹಾಗೂ ಉತ್ತರಾಧಿಕಾರಿ ನಿಯುಕ್ತಿ ಮಾಡಲಾಗುವುದೆಂದು ತಿಳಿಸಿದರು.
ಚಂದ್ರಶೇಖರ ಶಿವಾಚಾರ್ಯರ ಅಗಲಿದ ಪವಿತ್ರ ಆತ್ಮಕ್ಕೆ ದಯಾಘನನಾದ ಪರಮಾತ್ಮನು ಚಿರ ಶಾಂತಿ ನೀಡಲಿ, ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಭಕ್ತ ವರ್ಗಕ್ಕೆ ನೀಡಲೆಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.