ವಿಜಯಸಾಕ್ಷಿ ಸುದ್ದಿ, ಗದಗ : ಶಿರಡಿ ಸಾಯಿಬಾಬಾ ಅವರ ಬದುಕು, ಲೀಲೆ, ಪವಾಡಗಳು ಜನಸಮುದಾಯವನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಮೂಲಕ ಸಮಾಜದಲ್ಲಿ ಧಾರ್ಮಿಕ ಮನೋಭಾವವನ್ನು ಸ್ಪುರಿಸಿ ಆಮೂಲಾಗ್ರ ಚೈತನ್ಯ, ಸ್ಪೂರ್ತಿ, ಬದಲಾವಣೆ ತರಲು ಕಾರಣವಾಗಿವೆ ಎಂದು ಆಧ್ಯಾತ್ಮಿಕ ಚಿಂತಕ, ತಜ್ಞ ವೈದ್ಯ ಡಾ.ಸಂಗಮನಾಥ ಶೆಟ್ಟರ ಅಭಿಪ್ರಾಯಪಟ್ಟರು.
ಅವರು ಗದಗ ನಗರದ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸಾಯಿಬಾಬಾ ಸತ್ಸಂಗ ಗದಗ-ಬೆಟಗೇರಿ, ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿರುವ ಶ್ರೀ ಸಾಯಿ ಸಚ್ಚರಿತ್ರೆ ಪ್ರವಚನ ಮಾಲಿಕೆ-2ರಲ್ಲಿ ಪ್ರವಚನ ನೀಡಿ ಮಾತನಾಡಿದರು.
ಮನುಷ್ಯ ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿಯಾಗಿಟ್ಟುಕೊಳ್ಳಬೇಕು. ಅಂತರ್ಮುಖಿಯಾಗಿ ಆತ್ಮಾವಲೋಕನ ಮಾಡಿಕೊಳ್ಳುವ, ಚಂಚಲ ಮನಸ್ಸಿನ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವ ಗುಣವನ್ನು ಸಾಧಿಸಿಕೊಳ್ಳಬೇಕು ಎಂದರು.
ಗುರುವನ್ನು ಪರಮಾತ್ಮನ ಸ್ವರೂಪವೆಂದೇ ಭಾವಿಸಬೇಕು. ಜ್ಞಾನದ ಬಲದಿಂದ ಬುದ್ಧಿ ಚೈತನ್ಯಶೀಲತೆ ಮತ್ತು ಕ್ರಿಯಾಶೀಲತೆಯನ್ನು ಪಡೆದುಕೊಳ್ಳುತ್ತದೆ ಎಂಬುದು ಶ್ರೀಸಾಯಿ ಸಚ್ಚರಿತ್ರೆಯಿಂದ ತಿಳಿಯಬಹುದು.
ಪ್ರತಿಯೊಬ್ಬರೂ ತಮ್ಮ ತಮ್ಮ ಪ್ರಾರಬ್ಧ ಕರ್ಮಗಳನ್ನು ಪೂರೈಸಲೇಬೇಕು. ದೇವರ, ಗುರುವಿನ ಅನುಗ್ರಹ ಹಾಗೂ ನಾಮಸ್ಮರಣೆಯಿಂದ ಧರ್ಮ-ಸೇವಾ ಕಾರ್ಯದಿಂದ ಕೊಂಚ ಕರ್ಮದ ತೀವ್ರತೆಯನ್ನು ತಗ್ಗಿಸಿಕೊಳ್ಳಬಹುದು. ಆದ್ದರಿಂದ ದೇವರಲ್ಲಿ, ಗುರುವಿನಲ್ಲಿ ಶೃದ್ಧೆ-ಭಕ್ತಿ ಹೊಂದುವದು ಅಗತ್ಯ ಎಂದರು.
ಪ್ರಸಾದ ಸೇವೆ ವಹಿಸಿದ್ದ ಸಿದ್ದಣ್ಣ ಪಟ್ಟಣಶೆಟ್ಟಿ, ರವಿಪ್ರಕಾಶ ರೆಡ್ಡಿ ದಂಪತಿಗಳನ್ನು ಮತ್ತು ಸಾಯಿಬಾಬಾ ಧುನಿಗೆ ತಲಾ 11 ಸಾವಿರ ರೂ.ಗಳನ್ನು ದೇಣಿಗೆ ನೀಡಿದ ಮಲ್ಲಮ್ಮ ಶಾಂತಗೌಡ ಗೌಡರ ಹಾಗೂ ವಿಜಯಲಕ್ಷ್ಮಿ ಎ.ಪಲ್ಲೇದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಸಾಯಿಬಾಬಾ ಸತ್ಸಂಗ ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.