ವಿಜಯಸಾಕ್ಷಿ ಸುದ್ದಿ, ಗದಗ : ಮನುಷ್ಯನು ತನ್ನ ಜೀವನದಲ್ಲಿ ತಿಳಿದೋ ತಿಳಿಯದೆಯೋ ಮಾಡಿರುವ ಕರ್ಮವನ್ನು ಹೋಗಲಾಡಿಸಿಕೊಳ್ಳಲು ಹಾಗೂ ಗುರುವಿನ, ಪರಮಾತ್ಮನ ಮೇಲೆ ಅನನ್ಯವಾದ ಭಕ್ತಿ ಭಾವವನ್ನು ಹೊಂದಲು ಜಗತ್ತಿನ ಶಾಸ್ತçಗಳ ಜ್ಞಾನವನ್ನು ಸರಿಯಾದ ಮಾರ್ಗದಲ್ಲಿ ಪಡೆದುಕೊಂಡವನೇ ಮೋಕ್ಷವನ್ನು ಹೊಂದುತ್ತಾನೆ ಎಂದು ಶ್ರೀಮದ್ ಕಾಶಿ ಜ್ಞಾನಸಿಂಹಾಸನಾದೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ನುಡಿದರು.
ಆಷಾಡ ಮಾಸದ ಅಂಗವಾಗಿ ನಡೆದುಕೊಂಡು ಬರುತ್ತಿರುವ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಶ್ರೀ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಯಾವ ವ್ಯಕ್ತಿಯು ಜ್ಞಾನಾಗ್ನಿಯಲ್ಲಿ ಬೆಂದು ನಮ್ಮಲ್ಲಿರುವ ಅಂಧಕಾರ, ಅಹಂಕಾರ, ಮಮಕಾರಗಳೆಂಬ ದೋಷಗಳನ್ನು ದೂರ ಮಾಡಲು ಗುರುವಿನ ಮೂಲಕ ಅಜ್ಞಾನವನ್ನು ಹೋಗಲಾಡಿಸಿ ಸುಜ್ಞಾನವೆಂಬ ಜ್ಞಾನವನ್ನು ತುಂಬಿಕೊಳ್ಳಲು ನೆರವಾಗುವವನೇ ಗುರು. ಪರಮಾತ್ಮನ ಮೇಲೆ ನಮ್ಮ ಅನನ್ಯವಾದ ಶ್ರದ್ಧಾ-ಭಕ್ತಿಯನ್ನು ಹೊಂದಲು ನಾವು ಮಾಡಿರುವ ಜೀವನದ ಎಲ್ಲ ಕರ್ಮಗಳನ್ನು ಹೋಗಲಾಡಿಸಿ ಒಬ್ಬ ಪರಿಪೂರ್ಣವಾದ ಸುಜ್ಞಾನವುಳ್ಳ ಶ್ರೇಷ್ಠ ವ್ಯಕ್ತಿಯಾಗಿ ಮೋಕ್ಷದ ದಾರಿಯನ್ನು ಹೊಂದಲು ನಮಗೆ ಗುರುವಿನ ಮೊರೆ ಹೋಗಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.
ನರೇಗಲ್ ಹಿರೇಮಠದ ಶ್ರೀ ಷ.ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರು ಪ್ರಸ್ತಾವಿಕವಾಗಿ ಮಾತನಾಡುತ್ತ, ಸಿದ್ಧಾಂತ ಶಿಖಾಮಣಿಯ ಜ್ಞಾನಾಗಮ ಸ್ಥಳದ ಕುರಿತು ಮಾರ್ಮಿಕವಾಗಿ ನುಡಿದರು.
ಶಿವಾನಂದಯ್ಯ ಹಿರೇಮಠ ಸ್ವಾಗತಿಸಿದರು. ವಿ.ಕೆ. ಗುರುಮಠ ಕಾರ್ಯಕ್ರಮ ನಿರೂಪಿಸಿದರು.



