ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಪ್ರಾರಂಭೋತ್ಸವ ನಿಮಿತ್ತ ಬುಧವಾರ ಶ್ರೀ ಸಿದ್ಧಾರೂಡ ಕಥಾಮೃತ ಪುರಾಣ ಗ್ರಂಥವನ್ನು ಎತ್ತಿನ ಬಂಡಿಯಲ್ಲಿ ವಾದ್ಯಮೇಳ, ಭಜನೆ, ಮಹಿಳೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆ ಮಾಡಲಾಯಿತು.
ಪಟ್ಟಣದ ಕೆಇಬಿಯ ಆವರಣದ ಗಣೇಶ ದೇವಸ್ಥಾನದಿಂದ ಅಲಂಕೃತ ಎತ್ತಿನ ಬಂಡಿಯಲ್ಲಿ ಪುರಾಣ ಗ್ರಂಥವನ್ನಿರಿಸಿ ಹತ್ತಾರು ಜೋಡೆತ್ತುಗಳೊಂದಿಗೆ ಶೃದ್ಧಾ ಭಕ್ತಿಯಿಂದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯು ಪಂಪವೃತ್ತ, ಬಸ್ತಿಕೇರಿ, ವಿದ್ಯಾರಣ್ಯವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಮುಖ್ಯಬಜಾರ ರಸ್ತೆ, ಪಾದಗಟ್ಟಿ ಮೂಲಕ ಸೋಮೇಶ್ವರ ದೇವಸ್ಥಾನದವರೆಗೂ ಸಾಗಿ ಸೋಮೇಶ್ವರ ದೇವಸ್ಥಾನದಲ್ಲಿ ಸಂಪನ್ನಗೊಂಡಿತು.
ಮೆರವಣಿಗೆಗೆ ಚಾಲನೆ ನೀಡಿದ ಸೋಮೇಶ್ವರ ಭಕ್ತರ ಕಮಿಟಿ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಮತ್ತು ಸುನೀಲ ಮಹಾಂತಶೆಟ್ಟರ ಮಾತನಾಡಿ, ಪುಲಿಗೆರೆ ಸೋಮೇಶ್ವರನ ಪುಣ್ಯ ನೆಲದಲ್ಲಿ ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಶ್ರೀ ಸೋಮೇಶ್ವರ ಪುರಾಣ ಸಮಿತಿಯಿಂದ ಶ್ರಾವಣ ಮಾಸದುದ್ದಕ್ಕೂ ದೇವತಾ ಪುರುಷರ ಪುರಾಣ ಪ್ರವಚನವನ್ನು ನಡೆಸುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ವಕೀಲರಾದ ವಿ.ಎಲ್. ಪೂಜಾರ, ಎಸ್.ಪಿ. ಪಾಟೀಲ, ಚಂಬಣ್ಣ ಬಾಳಿಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ಚನ್ನಪ್ಪ ಜಗಲಿ, ಬಸವೇಶ ಮಹಾಂತಶೆಟ್ಟರ, ಸುನೀಲ ಮಹಾಂತಶೆಟ್ಟರ, ಭರಮಪ್ಪ ಕೊಡ್ಲಿ, ಶಂಕರ ಬಾಳಿಕಾಯಿ, ವಿರೂಪಾಕ್ಷಪ್ಪ ಆದಿ, ನಂದೀಶ ಬಂಡಿವಾಡ, ಮಯೂರಗೌಡ ಪಾಟೀಲ, ಬಂಗಾರೆಪ್ಪ ಮುಳಗುಂದ, ಬಸಣ್ಣ ಉಮಚಗಿ, ಎನ್.ಆರ್. ಸಾತಪುತೆ, ವಿಜಯ ಮೆಕ್ಕಿ, ಬಸವರಾಜ ಮೆಣಸಿನಕಾಯಿ, ರಾಜಶೇಖರ ಶಿಗ್ಲಿಮಠ, ಸಿದ್ದು ರಾಚನಾಯ್ಕರ, ಎನ್.ಎಂ. ಗೊರವರ, ಸೋಮಣ್ಣ ಸುತಾರ, ಮಂಜುನಾಥ ಜಲ್ಲಿ, ಈಶಪ್ಪ ಉಮಚಗಿ ಸೇರಿ ಅನೇಕರಿದ್ದರು.