ರವಿ ಬಸ್ರೂರರಿಗೆ `ಶ್ರೀ ಸಿದ್ಧಶ್ರೀ’ ರಾಷ್ಟ್ರೀಯ ಪ್ರಶಸ್ತಿ

0
Spread the love

ವಿಜಯಸಾಕ್ಷಿ ಸುದ್ದಿ, ಇಲಕಲ್: ತಾಲೂಕಿನ ಸುಕ್ಷೇತ್ರ ಶ್ರೀ ಸಿದ್ಧನಕೊಳ್ಳದ ಜಾತ್ರಾ ವಿಶೇಷವಾಗಿ, `ಶ್ರೀ ಸಿದ್ಧಶ್ರೀ’ ರಾಷ್ಟ್ರೀಯ ಉತ್ಸವ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2025ರ ಪ್ರಶಸ್ತಿಯ ಜೊತೆಗೆ ಹೊಸದಾಗಿ ಈ ವರ್ಷ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನೀಡಲಾಗುವುದೆಂದು ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಸಿದ್ಧನಕೊಳ್ಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ. 14 ಮತ್ತು 15ರಂದು ಎರಡು ದಿನಗಳ ಕಾಲ ಶ್ರೀ ಸಿದ್ಧನಕೊಳ್ಳದಲ್ಲಿ ಸಿದ್ಧಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಚಿತಾ ರಾಷ್ಟ್ರೀಯ ಚಲನಚಿತ್ರೋತ್ಸವ ಅದ್ದೂರಿಯಾಗಿ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಹಾಗೂ ರಾಜ್ಯ ಪ್ರಶಸ್ತಿಯನ್ನು ಕೊಡಲಾಗುವುದು. ಕಳೆದ ವರ್ಷ ಚಲನಚಿತ್ರ ಖ್ಯಾತ ನಟ ಶೋಭರಾಜ ಅವರಿಗೆ ನೀಡಲಾಗಿತ್ತು. ಈ ಸಲದ ರಾಷ್ಟ್ರೀಯ ಪ್ರಶಸ್ತಿಯನ್ನು ಕೆ.ಜಿ.ಎಫ್ ಖ್ಯಾತಿಯ ಚಲನಚಿತ್ರ ಸಂಗೀತ ನಿರ್ದೇಶಕ ರವಿ ಬಸರೂರ ಅವರಿಗೆ, ರಾಜ್ಯ ಪ್ರಶಸ್ತಿಯನ್ನು ಖ್ಯಾತ ಚಲನಚಿತ್ರ ಸಾಹಿತಿ, ನಿರ್ದೇಶಕ ಕೊಪ್ಪಳ ಜಿಲ್ಲೆಯ ಕಿನ್ನಾಳರಾಜು ಅವರಿಗೆ ನೀಡಲಾಗುವುದು. ಉತ್ತಮ ಕಲಾವಿದೆ ಪ್ರಶಸ್ತಿಯನ್ನು ಚಲನಚಿತ್ರ, ಕಿರುತೆರೆ ಕಲಾವಿದೆ ಸುನಂದಾ ಕಲಬುರ್ಗಿ ಅವರಿಗೆ ನೀಡಲಾಗುತ್ತಿದ್ದು, ಈ ಜಾತ್ರಾ ಮಹೋತ್ಸವಕ್ಕೆ ಮಠದ ಭಕ್ತಾದಿಗಳು ಆಗಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಗಣ್ಣ ತುರಡಗೇರಿ, ಸಂಗಮೇಶ ಹುದ್ದಾರ, ಡಾ. ಪ್ರಭು ಗಂಜಿಹಾಳ, ಹುಲ್ಲಪ್ಪ ಹಳ್ಳೂರ, ಹನುಮಂತ ಬಂಡಿ, ವೀರೂ ಐಹೊಳೆ, ಸಂಗನಗೌಡ ಕುರುಡಗಿ, ಜಯಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಹೇಶ ವಡ್ಡರ ಮತ್ತಿತರರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here