ವಿಜಯಸಾಕ್ಷಿ ಸುದ್ದಿ, ಗದಗ : ದತ್ತಾ ಗ್ರೂಪ್ ಶ್ರೀನಿವಾಸ ಕಲ್ಯಾಣೋತ್ಸವದ ಮೂಲಕ ಈ ಭಾಗದ ಜನರ ಕಷ್ಟಗಳು ದೂರಾಗಬೇಕು ಎನ್ನುವ ಸದುದ್ದೇಶ ಹೊಂದಿ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದೆ. ದತ್ತಾ ಗ್ರುಪ್ ಭವಿಷ್ಯದಲ್ಲಿ ಜನರ ವಿಶ್ವಾಸ ಉಳಿಸಿಕೊಂಡು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಶಿಸಿದರು.
ಇಲ್ಲಿನ ವಿದ್ಯಾದಾನ ಸಮಿತಿ ಮೈದಾನದಲ್ಲಿ ಗುರುವಾರ ದತ್ತಾ ಗ್ರೂಪ್ ೫ನೇ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ `ಶ್ರೀನಿವಾಸ ಕಲ್ಯಾಣೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದತ್ತಾ ಗ್ರುಪ್ ಕೇವಲ ೫ ವರ್ಷಗಳಲ್ಲಿ ಉತ್ತಮ ಕೆಲಸಗಳನ್ನು ಮಾಡಿ, ಸಮಾಜದ ಒಳಿತಿಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಂಡಿದೆ. ಈ ಕಲ್ಯಾಣೋತ್ಸವ ಪ್ರತಿ ವರ್ಷ ನಡೆಯುವಂತಾಗಲಿ. ದೇವರು ಅವಕಾಶ ಕೊಟ್ಟಾಗ ಅದನ್ನು ಸದುಪಯೋಗ ಮಾಡಿಕೊಂಡು, ಒಗ್ಗಟ್ಟು, ಪ್ರಾಮಾಣಿಕತೆಯನ್ನು ಬೆಳೆಸಿಕೊಂಡಾಗ ದತ್ತಾ ಗ್ರುಪ್ ರೀತಿಯ ಸಂಸ್ಥೆಗಳು ಯಶಸ್ವಿಯಾಗುತ್ತವೆ ಎಂದರು.
ವಿ.ಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ದತ್ತಾ ಗ್ರೂಪ್ ಸದಸ್ಯರು ಗಳಿಸಿದ ಹಣವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿದ್ದಾರೆ. ಕಾಯಕದಿಂದ ಬಂದ ಹಣ ದಾಸೋಹಕ್ಕೆ ವಿನಿಯೋಗಿಸಿದ್ದು ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ದತ್ತಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಭೂಮಾ, ದತ್ತಾ ಗ್ರುಪ್ ೫ ವರ್ಷದಲ್ಲಿ ೨೭ ಪ್ರಾಜೆಕ್ಟ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವ್ಯವಹಾರದ ಜೊತೆಗೆ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದೆ ಎಂದರು.
ಮಣಕವಾಡದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಬಿಜೆಪಿ ಮುಖಂಡ ಉಮೇಶಗೌಡ ಪಾಟೀಲ, ಕಾಂಗ್ರೆಸ್ ಯುವ ನಾಯಕ ಕೃಷ್ಣಗೌಡ ಪಾಟೀಲ, ವಿದ್ಯಾದಾನ ಶಿಕ್ಷಣ ಸಂಸ್ಥೆ ಚೇರಮನ್ ಧೀರಣ್ಣ ಹುಯಿಲಗೋಳ, ಕಾನೂನು ವಿವಿ ಸಿಂಡಿಕೇಟ್ ಸದಸ್ಯ ವಸಂತ ಲದ್ವಾ, ಏಕನಾಥ ಇರಕಲ್ ವೇದಿಕೆಯ ಮೇಲಿದ್ದರು.
ಬಾಹುಬಲಿ ಜೈನರ ನಿರ್ವಹಿಸಿದರು. ದತ್ತಾ ಗ್ರೂಪ್ ನ ನಾರಾಯಣ ಕುಡತರಕರ, ಎಸ್.ಎಚ್. ಶಿವನಗೌಡರ, ರಾಘವೇಂದ್ರ ಬಾರಡ, ಸದಾಶಿವ ಚನ್ನಪ್ಪನವರ, ಜಹೀರ ತಾಡಪತ್ರಿ ಉಪಸ್ಥಿತರಿದ್ದರು. ಖ್ಯಾತ ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ, ಸಂಗೀತ ಕಾರ್ಯಕ್ರಮ ಜನಮನ ರಂಜಿಸಿತು. ಬೆಂಗಳೂರು ಹಾಗೂ ತಿರುಪತಿಯ ಶ್ರೀ ಶ್ರೀವಾರಿ ಫೌಂಡೇಶನ್ ಅರ್ಚಕರು ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿಸಿದರು.
ಸಾನ್ನಿಧ್ಯ ವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಗದಗ ಸರ್ವಧರ್ಮ ಸಮನ್ವಯ, ದಾನ- ಧರ್ಮದ ಪುಣ್ಯಕ್ಷೇತ್ರವಾಗಿದೆ. ದತ್ತಾ ಗ್ರುಪ್ ಹಮ್ಮಿಕೊಂಡಿರುವ ಶ್ರೀನಿವಾಸ ಕಲ್ಯಾಣೋತ್ಸವ ಸಮಾಜದ ಕಲ್ಯಾಣೋತ್ಸವವಾಗಿದೆ. ಲೋಕ ಕಲ್ಯಾಣಕ್ಕಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.



