ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲಾದ್ಯಂತ ಈ ವರ್ಷ ಮುಂಗಾರು ಮಳೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಸುರಿದಿದ್ದು, ರೈತರು ಅಧಿಕ ಪ್ರಮಾಣದಲ್ಲಿ ಹೆಸರನ್ನು ಬಿತ್ತನೆ ಮಾಡಿದ್ದಾರೆ. ಚೆನ್ನಾಗಿಯೇ ಬೆಳೆದಿದ್ದ ಬೆಳೆಯೀಗ ಜಿಟಿ ಜಿಟಿ ಮಳೆಗೆ ಹಳದಿ ನಂಜಾಣು ರೋಗಬಾಧೆ ಆವರಿಸಿ ಸಂಪೂರ್ಣ ನಾಶವಾಗಿದೆ. ಅಳಿದುಳಿದ ಬೆಳೆಯನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರವೇ ಕನಿಷ್ಠ 10,500 ರೂಪಾಯಿಗೆ ಹೆಸರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಸಲು ಮುಂದಾಗಬೇಕು ಎಂದು ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಯಲ್ಲಪ್ಪ ಎಚ್ ಬಾಬರಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೈತರು ಕಾಳನ್ನು ದಲ್ಲಾಳಿಗಳಿಗೆ ಕೇಳಿದ ಬೆಲೆಗೆ ಮಾರಾಟ ಮಾಡಿ ಬರಬೇಕಾಗಿದೆ. ಅದಕ್ಕೆ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಇವರ ಹೇಳಿಕೆಗೆ ಅಂದಪ್ಪ ಕೂಳೂರು, ಹುಚ್ಚೀರಪ್ಪ ಜೋಗಿನ, ಗಿರೀಶ್ ಗುಡ್ಲಾನೂರ, ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಅನ್ನುಪ್ಪಗೌಡ ದೇಸಾಯಿ, ರಾಮಣ್ಣ ಖಂಡ್ರಿ ಮುಂತಾದ ರೈತ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.