ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗುವಲ್ಲಿ ಬಳ್ಳಾರಿ ರೆಡ್ಡಿ ಬ್ರದರ್ಸ್ ಪಾತ್ರ ಬಹು ಮುಖ್ಯವಾದದ್ದು ಎಂದು ಮಾಜಿ ಸಚಿವ ರೇಣುಕಾಚಾರ್ಯ ಅಭಿಪ್ರಾಯಪಟ್ಟರು.
ನಗರದ ತರಳಬಾಳು ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಮಂಡಲ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕರುಣಾಕರ ರೆಡ್ಡಿ ಸಚ್ಛಾರಿತ್ರ್ಯದ ರಾಜಕಾರಣಕ್ಕೆ ಹೆಸರಾದವರು. ಹರಪನಹಳ್ಳಿ,
ದಾವಣಗೆರೆಗಳಲ್ಲಿ ಬಿಜೆಪಿ ಸೋಲಿಗೆ ಪಕ್ಷದ ಹಿತಶತ್ರುಗಳೇ ಕಾರಣ, ಕಾಂಗ್ರೆಸ್ ಪಕ್ಷದ ಭಾಗ್ಯಗಳಲ್ಲ. ಹಿತಶತ್ರುಗಳ ಯಾರಿಗೆ, ಎಲ್ಲಿಂದ, ಎಲ್ಲಿಗೆ, ಏನು ಕಳಿಸಿದರು ಎನ್ನುವ ವಿಡಿಯೋ ದಾಖಲೆ ನಮ್ಮ ಬಳಿ ಇವೆ ಎಂದರು.
ಇಲ್ಲಿಯ ಶಾಸಕರಾದ ಲತಾ ಮಲ್ಲಿಕಾರ್ಜುನ್ ಅವರು ರೇಣುಕಾಚಾರ್ಯ ಶೋ ಮ್ಯಾನ್ ಎಂದು ಹೇಳಿಕೆ ನೀಡಿದ್ದಾರೆ. ಭದ್ರಾ ನೀರಿಗಾಗಿ ಬೀದಿಗಿಳಿದು ಹೋರಾಟ ಮಾಡಿದ ಜನ ನಾವು. ಚಳವಳಿ, ಪ್ರತಿಭಟನೆ ಬಗ್ಗೆ ಜ್ಞಾನವಿಲ್ಲದ ನೀವು, ಎಂ.ಪಿ. ಪ್ರಕಾಶ್ ಮಗಳು ಎನ್ನುವ ಒಂದೇ ಕಾರಣಕ್ಕೆ ಶಾಸಕರಾಗಿದ್ದೀರಿ ಎಂದು ಕಿಡಿ ಕಾರಿದರು.
ಮುಂದಿನ 20 ದಿನಗಳಲ್ಲಿ ರಾಜ್ಯ ಸರ್ಕಾರ ಪತನವಾಗುತ್ತದೆ. ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಅವರು ಪ್ರಚಾರಕ್ಕಾಗಿ ಆರ್.ಎಸ್.ಎಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಮಸೀದಿಗಳಲ್ಲಿ ಮೈಕ್ ಹಿಡಿದು ಕೂಗುವಾಗ ನಿಮಗಾಗದ ಕಿರಿಕಿರಿ, ಸಂಘ ಪರಿವಾರ ಪಥ ಸಂಚಲನದಿಂದು ಆಗುತ್ತದೆ ಎಂದು ಹೇಳುತ್ತಿರುವ ನಿಮಗೆ ಸಂಘ ಪರಿವಾರದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ತಾಕತ್ತಿದ್ದರೆ ಆರ್.ಎಸ್.ಎಸ್ ನಿಷೇಧಿಸಿ ಎಂದು ಸವಾಲು ಹಾಕಿದರು.
ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಸ್ಥಳೀಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡದೆ, ಸುಳ್ಳಿಗೆ ಪ್ರಸಿದ್ಧಿ ಹೊಂದಿದ್ದಾರೆ. ಚಾಮರಾಜನಗರದಲ್ಲಿ ಸಂಬಳ ಆಗದಿರುವ ಕಾರಣಕ್ಕೆ ವಾಟರ್ ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣ ಸಮಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ನಾನು ಅಧಿಕಾರದಲ್ಲಿದ್ದಾಗ ಹರಪನಹಳ್ಳಿ ಸಮಗ್ರ ಅಭಿವೃದ್ಧಿಯಾಗಿದೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಬಿಜೆಪಿ ಅವಧಿಯಲ್ಲಿ ಪೂರ್ಣಗೊಂಡಿದೆ. ಆದರೆ ಇಂದಿನ ಶಾಸಕರು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.
ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿ ಅವರಿಂದ ಪಕ್ಷದ ಧ್ವಜ ಪಡೆದ ಬಿಜೆಪಿ ಮಂಡಲ ಅಧ್ಯಕ್ಷ ಕೆ. ಶೇಖರಪ್ಪ ಅಧಿಕಾರ ವಹಿಸಿಕೊಂಡರು. ಹಡಗಲಿ ಶಾಸಕ ಎಲ್. ಕೃಷ್ಣನಾಯ್ಕ, ದಾವಣಗೆರೆ ಬಿಜೆಪಿ ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ್, ಜಿ.ಬಿ. ಅಜಯ್ ಕುಮಾರ, ಲೋಕಿಕೆರೆ ನಾಗರಾಜ್, ಮಂಡಲ ಅಧ್ಯಕ್ಷ ಕೆ. ಶೇಖರಪ್ಪ, ಮಂಡಲ ಪ್ರಧಾನ ಕಾರ್ಯದರ್ಶಿ ಎನ್.ಜಿ. ಸಿದ್ದೇಶ್, ಬಾಗಳಿ ಕೊಟ್ರೇಶಪ್ಪ ಮಾತನಾಡಿದರು.
ಈ ವೇಳೆ ಓದೊ ಗಂಗಪ್ಪ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ ಮೇಟಿ, ವಿಷ್ಣುವರ್ಧನ ರೆಡ್ಡಿ, ಪುರಸಭೆ ಸದಸ್ಯರಾದ ಎಂ.ಕೆ. ಜಾವಿದ್, ಕಿರಣ್ ಶ್ಯಾನುಭೋಗ, ರೊಕ್ಕಪ್ಪ, ಗೌಳಿ ವಿನಯ್, ಮುಖಂಡರಾದ ಆರ್. ಲೋಕೇಶ್, ಮುದುಕವ್ವನವರ ಶಂಕರ್, ಕಡೇಮನಿ ಸಂಗಮೇಶ್, ಎಂ. ಮಲ್ಲೇಶ, ಮೆಹಬೂಬ್ ಸಾಬ್, ಹನುಮಂತಪ್ಪ, ಆರ್. ಮಂಜುನಾಥ ನಾಯ್ಕ, ಕಲ್ಲೇರ ಬಸವರಾಜ್, ಪಂಪಾನಾಯ್ಕ ಮುಂತಾದವರಿದ್ದರು.
ಪಟ್ಟಣದಲ್ಲಿ ಸೇರಿದಂತೆ ತಾಲೂಕಿನ ಹಲವೆಡೆ ಕೆಟ್ಟುಹೋದ ಕಡೆ ರಸ್ತೆ ಮಾಡುತ್ತಿಲ್ಲ. ನನ್ನ ಅವಧಿಯಲ್ಲಿ ಆಗಿರುವ ರಸ್ತೆಗಳಿಗೆ ತೇಪೆ ಹಚ್ಚುವ ಕೆಲಸವಾಗುತ್ತಿದೆ. ನಾನು ಎಂದಿಗೂ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದ್ವೇಷ ಮಾಡಿಲ್ಲ. ಜನರು ನ್ಯಾಯ ಕೇಳಲು ಹೋದರೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಧಮಕಿ ಹಾಕುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ತಾಲೂಕು ಶಾಂತಿ-ಸುವ್ಯವಸ್ಥೆಯಿಂದು ಕೂಡಿತ್ತು. ಇಂದು ಜನರು ದಿನನಿತ್ಯ ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಮೆಟ್ಟಿಲು ಹತ್ತುವುದು ಸಾಮಾನ್ಯವಾಗಿದೆ ಎಂದು ಮಾಜಿ ಸಚಿವ ಜಿ.ಕರುಣಾಕರ ರೆಡ್ಡಿ ಹೇಳಿದರು.



