ವಿಜಯಸಾಕ್ಷಿ ಸುದ್ದಿ, ಗದಗ: ಪಶು ಸಂಗೋಪನೆ ಮತ್ತು ಪ್ರಾಣಿ ಕಲ್ಯಾಣ ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ತಾಂತ್ರಿಕ ಜ್ಞಾನ ವಿನಿಮಯ ಅತ್ಯಗತ್ಯ ಎಂದು ರಾಜ್ಯದ ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.
ನಾಗಾವಿಯ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವ ವಿದ್ಯಾಲಯ-ಗ್ರಾಮ ಗಂಗೋತ್ರಿಯ ಆವರಣದಲ್ಲಿ ಗದಗ ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ (ಬೆಂಗಳೂರು), ಕರ್ನಾಟಕ ಪಶು ವೈದ್ಯಕೀಯ ಸಂಘ (ಗದಗ) ಹಾಗೂ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೆಶನ್ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಪಶು ಸಂಗೋಪನೆ ಹಾಗೂ ಪ್ರಾಣಿ ಕಲ್ಯಾಣ ಮಾಸಾಚರಣೆ ಅಂಗವಾಗಿ ಬೆಳಗಾವಿ ವಿಭಾಗ ಮಟ್ಟದ ತಾಂತ್ರಿಕ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕಡಿಮೆಯಾಗಿರುವುದೇ ಗ್ರಾಮೀಣ ಭಾಗದ ಸಂಪತ್ತು ವೃದ್ಧಿಯಾಗದೀರಲು ಕಾರಣ. ದೇಶದ ಸಂಪತ್ತು ವೃದ್ಧಿಯಲ್ಲಿ ಹೈನುಗಾರಿಕೆ ಪ್ರಭಾವ ಅಧಿಕವೆಂದು ಅರಿತು, ತಾಂತ್ರಿಕತೆ ಬಳಸಿ ಅಭಿವೃದ್ಧಿಯಡೆಗೆ ಸಾಗಬೇಕಿದೆ. ಆರೋಗ್ಯ, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರಕ್ಕೆ ನೀಡುವಷ್ಟು ಪ್ರಾಮುಖ್ಯತೆ ಹೈನುಗಾರಿಕೆ ಕ್ಷೇತ್ರಕ್ಕೂ ನೀಡಿದ್ದರೆ, ಇಂದು ರೈತರ ಸಂಪತ್ತು ಅಧಿಕವಾಗುತ್ತಿತ್ತು. ರೈತರ ಆರ್ಥಿಕ ಪ್ರಗತಿಗೆ ಅತ್ಯಾಧುನಿಕ ಹೈನುಗಾರಿಕೆ ಪರಿಹಾರವಾಗಿದೆ. ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಲಾಭವಾಗಿಸಲು ತಾಂತ್ರಿಕತೆ ಅಳವಡಿಕೆ ಅನಿವಾರ್ಯ ಎಂದು ಸಚಿವ ಪಾಟೀಲ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಇಂದು ವಿಜ್ಞಾನ ತಂತ್ರಜ್ಞಾನ ಬಹಳಷ್ಟು ಮುಂದುವರೆದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಶೋಧನೆಗೆ ಸಾಕಷ್ಟು ಪ್ರಮಾಣದಲ್ಲಿ ಅನುದಾನ ನೀಡುತ್ತಿವೆ. ಅದು ಸರಿಯಾಗಿ ಸದ್ಬಳಕೆ ಆಗಲಿ ಎಂದರು.
ಈ ಸಮ್ಮೇಳನದಲ್ಲಿ ಜ್ಞಾನ-ತಂತ್ರಜ್ಞಾನ ವಿನಿಮಯವಾಗಿ ಅದು ಸರಿಯಾಗಿ ಅನುಷ್ಠಾನ ಆಗಲಿ. ಕುರಿ, ಕೋಳಿ ಸೇರಿದಂತೆ ಹೈನುಗಾರಿಕೆ ಮೂಲಕ ತಂತ್ರಜ್ಞಾನ ಬಳಸಿ ಹೇಗೆ ಲಾಭದಾಯಕ ಮಾಡಬಹುದು ಎಂಬ ಕುರಿತು ಚರ್ಚೆಯಾಗಲಿ.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಪಿ. ಶ್ರೀನಿವಾಸ, ವಿಶ್ವವಿದ್ಯಾಲಯದ ಕುಲಪತಿಗಳು (ಪ್ರಭಾರ) ಹಾಗೂ ಕುಲಸಚಿವ ಪ್ರೊ. ಡಾ. ಸುರೇಶ್ ವಿ. ನಾಡಗೌಡರ, ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಎಸ್.ಜಿ. ಯಲಗೋಡ, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಬಿ. ರಾಮಚಂದ್ರ, ಭಾರತ ಸರಕಾರದ ಮಾಜಿ ಪಶು ಸಂಗೋಪನಾ ಆಯುಕ್ತರು ಹಾಗೂ ಬೀದರ ಕೆವಿಎಫ್ಎಸ್ಯು ಉಪಕುಲಪತಿ ಡಾ. ಸುರೇಶ್ ಎಸ್. ಹೊನ್ನಪ್ಪಗೊಳ, ಪಶು ವೈದ್ಯಕೀಯ ಸೂಕ್ಷ್ಮ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಬೆಂಗಳೂರು ಪ್ರಯೋಗಾಲಯದ ಮುಖ್ಯಸ್ಥರಾದ ಶ್ರೀಕೃಷ್ಣ ಇಸ್ಲೂರ, ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಇಂಡಿಯಾ ಫೌಂಡೇಶನ್ ಪ್ರತಿನಿಧಿ ರಮೇಶ್ ಭಜಂತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಂಟಿ ನಿರ್ದೇಶಕ (ರಾಜ್ಯ ವಲಯ) ಡಾ. ಎಚ್. ನಾಗರಾಜ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ತಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗದಗ ಉಪನಿರ್ದೇಶಕ ಡಾ. ಎಚ್.ಬಿ. ಹುಲಗಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಆರ್.ವೈ. ಗುರಿಕಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರೊ. ಬಾಹುಬಲಿ ಜೈನರ ನಿರ್ವಹಿಸಿದರು.
ಪಶುಪಾಲನಾ ಕ್ಷೇತ್ರ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ವೈಜ್ಞಾನಿಕ ಪದ್ಧತಿ, ಹೊಸ ತಂತ್ರಜ್ಞಾನ ಮತ್ತು ಪ್ರಾಣಿ ಕಲ್ಯಾಣದ ಮೌಲ್ಯಗಳನ್ನು ಸಮನ್ವಯಗೊಳಿಸುವ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಕ್ಷೇತ್ರದ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದೆ. ರಾಜ್ಯದ ಕೋಲಾರ, ಮಂಡ್ಯ ಸೇರಿದಂತೆ ಮಹಾರಾಷ್ಟ್ರ ರಾಜ್ಯದಲ್ಲಿ ಹೈನುಗಾರಿಕೆ ರೈತರಿಗೆಲ್ಲ ಲಾಭದಾಯಕ ಕಸುಬಾಗಿದೆ. ಅವರಿಗೆ ಸಾಧ್ಯವಾಗಿದ್ದು ಇಲ್ಲಿ ಏಕೆ ಸಾಧ್ಯವಾಗಿಲ್ಲ ಎಂಬ ಚರ್ಚೆಯಾಗಲಿ.
-
ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.



