ಬೀದರ್:– ಬೀದರ್ ನಗರದ ಆದರ್ಶ ಕಾಲೋನಿಯಲ್ಲಿ ಮೂರನೇ ಮಹಡಿಯಿಂದ 7 ವರ್ಷದ ಮಗುವನ್ನ ನೂಕಿ ಮಲತಾಯಿ ಜೀವ ತೆಗೆದಿರುವ ಘಟನೆ ಜರುಗಿದೆ.
ಮೃತ ಬಾಲಕಿಯನ್ನು ಶಾನವಿ ಎಂದು ಗುರುತಿಸಲಾಗಿದೆ. ಮೃತ ಶಾನವಿ ತಾಯಿ ಕಾಯಿಲೆಗೆ ತುತ್ತಾಗಿ ಕಳೆದ 6 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಳು. ಇದಾದ ಬಳಿಕ ಮೃತ ಶಾನವಿ ತಂದೆ ಸಿದ್ಧಾಂತ, 2023ರಲ್ಲಿ ರಾಧಾ ಜೊತೆ 2ನೇ ವಿವಾಹವಾಗಿದ್ದರು. ಸಿದ್ಧಾಂತ ಹಾಗೂ ರಾಧಾಗೆ ಎರಡು ಅವಳಿ ಮಕ್ಕಳು ಹುಟ್ಟಿದ ಬಳಿಕ ಸಿದ್ಧಾಂತರ ಮೊದಲನೇ ಮಗಳ ತಮಗೆ ಹೊರೆಯಾಗ್ತಾಳೆಂದು 2ನೇ ಪತ್ನಿ ಜೀವ ತೆಗೆದಿದ್ದಾಳೆ. ಆಗಸ್ಟ್ 27ರಂದು ಶಾನವಿ ಮೃತಪಟ್ಟಾಗ, ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದಾರೆ. ಆದ್ರೆ ಪಕ್ಕದ ಮನೆಯವರು ಸಿಸಿಟಿವಿ ದೃಶ್ಯ ಕಳುಹಿಸಿದ ಬಳಿಕ ಮಲತಾಯಿ ಕೃತ್ಯ ಬೆಳಕಿಗೆ ಬಂದಿದೆ. ರಾಧಾ ಬಾಲಕಿ ಜೊತೆ ಟೇರಸ್ ಮೇಲೆ ಸಂಶಯಾಸ್ಪದ ರೀತಿ ಓಡಾಡುವ ದೃಶ್ಯ ಸೆರೆಯಾಗಿದೆ.
ಈ ಸಿಟಿಟಿವಿ ದೃಶ್ಯವನ್ನ ಸೆಪ್ಟೆಂಬರ್ 12ರಂದು ಬಾಲಕಿ ತಂದೆ ಸಿದ್ಧಾಂತ ವಾಟ್ಸಾಪ್ಗೆ ಪಕ್ಕದ ಮನೆ ಮಾಲೀಕ ಕಳುಹಿಸಿದ್ದಾರೆ. ಮೇಲ್ಮಹಡಿಯಲ್ಲಿ ಖುರ್ಚಿ ಇಟ್ಟು ಅದರ ಮೇಲೆ ಬುಟ್ಟಿ ಉಲ್ಟಾ ಇಟ್ಟು ಶಾನವಿಯನ್ನ ಕೂರಿಸಿರೊದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯ ಆಧರಿಸಿ ಮೃತ ಬಾಲಕಿ ಅಜ್ಜಿ, ರಾಧಾ ವಿರುದ್ಧ ದೂರು ನೀಡಿದ್ದು, ಈ ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿ ರಾಧಾಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.