ವಿಜಯಸಾಕ್ಷಿ ಸುದ್ದಿ, ಗದಗ: ಯುವಕ-ಯುವತಿಯರು ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಕ್ರೀಡೆ ಜೀವನಕ್ಕೆ ಅತಿ ಅಮೂಲ್ಯವಾದದ್ದು. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸಿ ಮತ್ತು ನಿರ್ಣಾಯಕರ ನಿರ್ಧಾರದಲ್ಲಿ ಬದ್ಧರಾಗಿರಬೇಕು ಎಂದು ಮಾಜಿ ಸಚಿವ ಕಳಕಪ್ಪ ಜಿ.ಬಂಡಿ ಅಭಿಪ್ರಾಯಪಟ್ಟರು.
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆಯ ಯುವ ಮೋರ್ಚಾ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ, ಭಾರತದ ಹೆಮ್ಮೆಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜ.8 ಹಾಗೂ 9ರಂದು ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿ.ಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನಮ್ಮ ನೆಲದ ಸಂಸ್ಕೃತಿಯ ಅರಿವು ಮೂಡಿಸಲು ಕಬಡ್ಡಿ ಪಂದ್ಯಾವಳಿ ಸಹಕಾರಿಯಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ, ಎಲ್ಲಾ ಅನಂತ ಶಕ್ತಿ ನಿಮ್ಮಲ್ಲಿ ಇದೆ. ನೀವು ಏನು ಬೇಕಾದರೂ ಮಾಡಬಹುದು. ಯುವಕರಾದ ನೀವೆಲ್ಲರೂ ಈ ವಯೋಮಿತಿಯಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಅದಕ್ಕಾಗಿ ಎಲ್ಲಾ ಯುವಕ-ಯುವತಿಯರು ಕ್ರೀಡೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕೆಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಅಕ್ಕಿ ಮಾತನಾಡಿ, ಧೈರ್ಯ, ಸಾಹಸ, ಒಗ್ಗಟ್ಟಿನ ಗುಣಗಳನ್ನು ಜೀವನದಲ್ಲಿ ಎದುರಿಸಲು ಕಬಡ್ಡಿಯಂತಹ ಕ್ರೀಡೆಗಳ ಮೂಲಕ ಸಾಧ್ಯವಾಗಿಸಬಹುದು ಎಂದರು.
ಪAದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡ್ರು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದು ಪಲ್ಲೇದ, ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ಮುತ್ತಣ್ಣ ಕಡಗದ, ರವಿ ಕರಿಗಾರ, ಬಸವರಾಜ ಸಂಗನಾಳ, ರಾಜೇಶ್ ಕಟ್ಟಿಮನಿ, ನವೀನ್ ಕುರ್ತಕೋಟಿ, ದಿಂಡೂರ್, ಸಚಿನ್ ಮಡಿವಾಳರ, ಬಸವರಾಜ ನರೇಗಲ್, ರೋಹನ್ ಕುಮಾರ್ ಕುಂದನಹಳ್ಳಿ, ಚೆನ್ನು ಪಟೇಲ್, ಸಂತೋಷ್ ಚಾವೂರ, ಕಿರಣ್ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.
ಕಬಡ್ಡಿ ಪಂದ್ಯಾವಳಿಯಲ್ಲಿ ರೋಣ, ಮುಂಡರಗಿ, ನರಗುಂದ, ಲಕ್ಕುಂಡಿ, ಗಜೇಂದ್ರಗಡ, ಗದಗ ಮುಂತಾದ ಗ್ರಾಮೀಣ ಪ್ರದೇಶಗಳಿಂದ 30ಕ್ಕೂ ಹೆಚ್ಚು ಕಬಡ್ಡಿ ತಂಡಗಳು ಪಾಲ್ಗೊಂಡು ಬಿರುಸಿನ ಕಬಡ್ಡಿ ಆಟವನ್ನು ಪ್ರದರ್ಶಿಸಿದರು.