ಕೊಡಗು :- ವಾಸದ ಮನೆ ಮೇಲೆ ನಿಗೂಢವಾಗಿ ಪದೇ ಪದೇ ಕಲ್ಲು ಬೀಳುತ್ತಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಹಾಲುಗುಂದ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ವಿಂದ್ಯಾ ಎಂಬುವರ ಮನೆ ಮೇಲೆ ಕಲ್ಲುಗಳು ಬೀಳುತ್ತಿದ್ದು, ಘಟನೆಯಿಂದ ಕುಟುಂಬಸ್ಥರಲ್ಲಿ ಆತಂಕ ಮನೆಮಾಡಿದೆ. ವಿದ್ಯಾ ಅವರ ಮನೆ ತೋಟದೊಳಗೆ ಇದ್ದು, ಕಿಡಿಗೇಡಿಗಳು ನಿರಂತರವಾಗಿ ಕಲ್ಲು ತೂರುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರು ಭಯಭೀತರಾಗಿದ್ದಾರೆ.
ಘಟನೆ ಸಂಬಂಧ ಪೊಲೀಸರಿಗೆ ಸಂತ್ರಸ್ತ ಕುಟುಂಬದವರು ಕರೆ ಮಾಡಿ ತಿಳಿಸಿದರೂ ಇದುವರೆಗೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಒಮ್ಮೆ ಬಂದು ಪರಿಶೀಲನೆ ಮಾಡಿ ಹೋದ ಸಿದ್ದಾಪುರ ಠಾಣೆ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೇ ಮಾರನೆ ದಿನ ಯಾರೆಂದು ಪತ್ತೆಹಚ್ಚಿ ಕ್ರಮಕೈಗೊಳ್ಳುವುದಾಗಿ ಹೇಳಿ ಹೋಗಿದ್ದಾರೆ. ಆದರೆ ಮತ್ತೆ ಮತ್ತೆ ಮನೆ ಮೇಲೆ ಕಲ್ಲು ತೂರಿದಾಗ ಪೊಲೀಸರಿಗೆ ಹೇಳಿದರು ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಬದಲಾಗಿ ನೀವು ಪೊಲೀಸರಿಗೆ ವಿನಾಕಾರಣ ಕರೆ ಮಾಡುತ್ತಿದ್ದೀರಿ ನಿಮ್ಮ ಮೇಲೆ ಕೇಸ್ ಹಾಕಬೇಕಾಗುತ್ತದೆ ಎಂದು ಕುಟುಂಬಸ್ಥರಿಗೆ ಪೊಲೀಸರೇ ಧಮ್ಕಿ ಹಾಕಿದ ಆರೋಪ ಕೇಳಿ ಬಂದಿದೆ. ಪೊಲೀಸರಿಂದ ರಕ್ಷಣೆ ಸಿಗದ ಹಿನ್ನೆಲೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆ ವಿಂದ್ಯಾ ಅವರು, ಪೋಸ್ಟ್ ಮಾಡಿದ್ದಾರೆ.
ಇನ್ನೂ ಮನೆ ಮೇಲೆ ಕಲ್ಲು ಬಿದ್ದಾಗಲೆಲ್ಲಾ ಮಕ್ಕಳು ಹೆದರಿ ಅಳುತ್ತಿವೆ ಎಂದು ಮಹಿಳೆ ಕಣ್ಣೀರು ಹಾಕಿದ್ದಾರೆ. ಕಳೆದ 18 ದಿನಗಳಿಂದ ನಿರಂತರವಾಗಿ ಕಿಡಿಗೇಡಿಗಳು ಕಲ್ಲು ತೂರುತ್ತಿದ್ದಾರೆ ಎಂದು ವಿಂದ್ಯಾ ಹೇಳಿದ್ದಾರೆ.