ತುಮಕೂರು: ಗೃಹ ಸಚಿವರ ತವರು ಜಿಲ್ಲೆಯ ಶಾಲೆಯ ಆವರಣದಲ್ಲಿ ಪುಂಡರಾವಳಿ ಹೆಚ್ಚಾಗಿದೆ. ಸರ್ಕಾರಿ ಶಾಲಾ ಬಾಲಕಿಯರ ಶೌಚಾಲಯದ ಮೇಲೆ ಪುಂಡರಿಂದ ಕಲ್ಲು ತೂರಾಟ ನಡೆಸಿದ್ದು, ಪ್ರಶ್ನಿಸಿದ ವಿದ್ಯಾರ್ಥಿಗೆ ಹುಳಿಯಾರು KPS ಶಾಲೆಯ ಆವರಣಕ್ಕೆ ನುಗ್ಗಿ ಪುಂಡರ ಗುಂಪಿನಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನಲ್ಲಿ ನಡೆದಿದೆ.
ಹುಳಿಯರು ನಿವಾಸಿ ಮಹಬೂಬ್ ಷರಿಫ್, ಶಂಶುದ್ದೀನ್, ಇರ್ಫಾನ್, ಮುಬಾರಕ್, ಮುದಾಸೀರ್, ಯಾಸೀನ್, ತಾಝೀಮ್ ಕಲ್ಲು ತೂರಿ, ಹಲ್ಲೆ ಮಾಡಿದ ಆರೋಪಿಗಳಾಗಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಕೆಪಿಎಸ್ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಶುಕ್ರವಾರ (ಮಾ.14)ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು.
ಈ ವೇಳೆ ಬಾಲಕಿಯರ ಶೌಚಾಲಯದ ಮೇಲೆ ಅನ್ಯಕೋಮಿನ ಪುಂಡರು ಕಲ್ಲು ಎಸೆಯುತ್ತಿದ್ದನ್ನು ಯಶ್ವಂತ್ ಪ್ರಶ್ನಿಸಿದ್ದಾರೆ. ಇಷ್ಟಕ್ಕೇ ಶಾಲೆಯ ಆವರಣದೊಳಗೆ ನುಗ್ಗಿದ ಅನ್ಯಕೋಮಿನಿ 6-7ಜನ ಪುಂಡರು ಯಶ್ವಂತ್ನನ್ನು ಅಟ್ಟಾಡಿಸಿಕೊಂಡು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ವಿಚಾರ ತಿಳಿದು ಕೂಡಲೆ ಶಾಲೆಯ ಮುಖ್ಯಾಪಾದ್ಯಯರು ಸ್ಥಳಕ್ಕೆ ದೌಡಾಯಿ, ಹಲ್ಲೆ ಮಾಡುವುದನ್ನು ತಡೆದು,
ಯಶ್ವಂತ್ನನ್ನು ರಕ್ಷಿಸಿದ್ದಾರೆ. ಬಳಿಕ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುವುದನ್ನು ಕಂಡ ಪುಂಡರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ಯಶ್ವಂತ್ರ ಬೆನ್ನು ಹಾಗೂ ತಲೆಗೆ ತೀವ್ರಪೆಟ್ಟಾಗಿದೆ. ಗಾಯಾಳು ವಿದ್ಯಾರ್ಥಿ ಯಶ್ವಂತ್ರನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲಾ ಆಡಳಿತ ಮಂಡಳಿ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.