ವಿಜಯಸಾಕ್ಷಿ ಸುದ್ದಿ, ಧಾರವಾಡ : ಜಲಾಶಯಗಳಲ್ಲಿ ಇರುವ ನೀರಿನ ಸಂಗ್ರಹಣೆಯನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆ. ಹಿಂದಿನ ವರ್ಷಗಳ ಮಾಹಿತಿಯ ಆಧಾರದ ಮೇಲೆ ಕುಡಿಯುವ ನೀರಿನ ಕೊರತೆ ಉಂಟಾಗುವ ಗ್ರಾಮಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಈ ಗ್ರಾಮಗಳ ವಸ್ತುಸ್ಥಿತಿಯ ಮೇಲೆ ನಿಗಾವಹಿಸಲಾಗಿದೆ ಎಂದು ಜಿಲ್ಲಾ ವಿಪತ್ತು ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದ್ದಾರೆ.
ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮತ್ತು ಖಾಸಗಿ ಬೋರ್ವೆಲ್ ಗುರುತಿಸಿ ಅವುಗಳ ಮೂಲಕ ಕುಡಿಯುವ ನೀರಿನ ಕೊರತೆಯನ್ನು ಅಗತ್ಯತೆಗೆ ಅನುಗುಣವಾಗಿ ನೀಗಿಸಲು ಈಗಾಗಲೇ ಕ್ರಮ ವಹಿಸಲಾಗಿರುತ್ತದೆ. ಪರ್ಯಾಯ ಕಾರ್ಯತಂತ್ರವನ್ನು (ಕಾಂಟಿಂಜೆನ್ಸಿ ಯೋಜನೆ) ರೂಪಿಸಲಾಗಿದ್ದು, ಅಗತ್ಯತೆಗೆ ತಕ್ಕಂತೆ ಇದನ್ನು ಅನುಷ್ಠಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಗ್ರಾಮ ಅಥವಾ ಪಟ್ಟಣಕ್ಕೆ ಅಗತ್ಯವಿರುವಷ್ಟು ನೀರನ್ನು ನಿಯಮಾನುಸಾರ ಪೈಪ್ಲೈನ್ ಮೂಲಕ ಪೂರೈಸಲಾಗುತ್ತಿದೆ. ಅಸ್ತಿತ್ವದಲ್ಲಿರುವ ನೀರು ಸರಬರಾಜು ಯೋಜನೆಗಳ ವಿದ್ಯುತ್ ಪಂಪ್ಗಳು, ಕೈ ಪಂಪುಗಳ ದುರಸ್ತಿ, ಕಡಿಮೆ ನೀರಿನ ಲಭ್ಯತೆ ಇರುವ ಬೊರ್ವೆಲ್ಗಳನ್ನು ಫ್ಲಶಿಂಗ್ ಮಾಡುವುದು ಮತ್ತು ಆಳಗೊಳಿಸುವುದು ಮತ್ತು ಆರ್ಒ ಪ್ಲಾಂಟ್ಗಳ ನಿರ್ವಹಣೆ ಇತ್ಯಾದಿಗಳನ್ನು ತೆಗೆದುಕೊಳ್ಳಲಾಗಿದ್ದು ಇದರ ಮೇಲೆ ನಿಗಾವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರ ಮತ್ತು ತಾಲ್ಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳ ಸಭೆಗಳನ್ನು ಪ್ರತಿವಾರ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.