ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಸ್ಲಂ ಜನರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಗದಗ ಜಿಲ್ಲಾ ಸ್ಲಂ ಸಮಿತಿಯಿಂದ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತ ಬಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸ್ಲಂ ಪ್ರದೇಶದ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನಮ್ಮ ಸಂಘಟನೆಯನ್ನು ಬಲಿಷ್ಠಗೊಳಿಸುವುದು ಅಗತ್ಯವಾಗಿದೆ ಎಂದು ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಹೇಳಿದರು.
ಅವರು ನಗರದ ಗಂಗಿಮಡಿ ರಸ್ತೆಯ ನವನಗರ ಸ್ಲಂ ಪ್ರದೇಶದಲ್ಲಿ ಸ್ಥಳೀಯ ನಿವಾಸಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನವನಗರ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬಗಳಿಗೆ ಈಗಾಗಲೇ ಸ್ಲಂ ಬೋರ್ಡ್ನಿಂದ ವಸತಿ ಯೋಜನೆ ಕಲ್ಪಿಸಲಾಗಿದೆ. ಈ ಪ್ರದೇಶದಲ್ಲಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಂಘಟನೆಯ ಮೂಲಕ ನಿರಂತರ ಹೋರಾಟಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ನವನಗರ ಪ್ರದೇಶದ ಕುಟುಂಬಗಳನ್ನು ಎತ್ತಂಗಡಿ ಮಾಡಲು ಭೂ ಮಾಫಿಯಾಗಳು ಕುತಂತ್ರ ನಡೆಸುತ್ತಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ಜನರಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.
ನವನಗರ ಸಮಿತಿ ಉಪಾಧ್ಯಕ್ಷ ಸಲೀಂ ಹರಿಹರ, ಕಾರ್ಯದರ್ಶಿ ಖಾಜಾಸಾಬ ಇಸ್ಮಾಯಿಲನವರ, ಶೇಖಪ್ಪ ಶೆಗಣಿ, ಅಶೋಕ ಗುಮಾಸ್ತೆ, ಮೊಹ್ಮದಗೌಸ ಅಕ್ಕಿ, ಇಬ್ರಾಹಿಂ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ, ಖಾಜಾಸಾಬ ಗಬ್ಬೂರ. ಬಸವರಾಜ ಕಳಸದ, ದಾವಲಸಾಬ ಮೋಮಿನ, ಜಂದಿಸಾಬ ಢಾಲಾಯತ, ಮಹ್ಮದರಫೀಕ ಬರದೂರ, ಮೆಹಬೂಬ ಹುಯಿಲಗೋಳ, ರುದ್ರಪ್ಪ ಕಳಬಂಡಿ, ಮಂಜುನಾಥ ಮುಗಳಿ, ವೆಂಕಟೇಶ ಬಿಂಕದಕಟ್ಟಿ, ನಾರಾಯಣ ಗೌಳಿ, ಹಜರತಅಲಿ ಹಾವೇರಿ, ದಾದಾಪೀರ ಅಣ್ಣೀಗೇರಿ, ಖಾಜಾಸಾಬ ಉಮಚಗಿ, ರಿಜ್ವಾನ ಮುಲ್ಲಾ, ಯಾಸೀನ ನದಾಫ್, ನಾರಾಯಣ ಗಾಯಕವಾಡ ಸೇರಿದಂತೆ ನವನಗರ ಸ್ಲಂ ಪ್ರದೇಶದ ನೂರಾರು ನಿವಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ನವನಗರ ಶಾಖೆ ಸಮಿತಿ ಅಧ್ಯಕ್ಷ ಮೆಹಬೂಬಸಾಬ ಬಳ್ಳಾರಿ ಮಾತನಾಡಿ, ನಮ್ಮ ಭಾಗದ ಜನರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾವು ಕಾರ್ಮಿಕರು ಕಷ್ಟಪಟ್ಟು ದುಡಿದು ಹಣವನ್ನು ಕ್ರೋಢೀಕರಿಸಿ ಈ ಹಿಂದೆ ಖರೀದಿ ಮಾಡಿರುವ ನಮ್ಮ ನಿವೇಶನಗಳನ್ನು ಕಬಳಿಸಿಕೊಳ್ಳಲು ಭೂ ಮಾಫಿಯಾಗಳು ಕುತಂತ್ರ ನಡೆಸುತ್ತಿವೆ. ಇದನ್ನು ವಿರೋಧಿಸಿ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿದ್ದೇವೆ ಎಂದರು.