ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ, ಏಕಾಗ್ರತೆ ರೂಢಿಸಿಕೊಂಡು ಸತತಾಭ್ಯಾಸದ ಮೂಲಕ ಉನ್ನತ ಗುರಿ ಸಾಧಿಸಬೇಕು ಎಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಸರಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಚೇತನ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗ ಸಂಸ್ಥೆಯ ಎಸ್.ಎಂ.ಜೆ.ವಿ.ಜಿ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಆಯ್ದುಕೊಂಡ ಕ್ಷೇತ್ರದಲ್ಲಿ ಶ್ರೇಷ್ಠವಾದುದನ್ನು ಸಾಧಿಸಿಲು ಏಕಾಗ್ರತೆಯಿಂದ ಶ್ರಮಿಸಬೇಕು. ನಮ್ಮ ಭವಿಷ್ಯದ ರೂವಾರಿಗಳು ನಾವೇ ಆದ್ದರಿಂದ ಉನ್ನತ, ಶಿಕ್ಷಣ, ಜ್ಞಾನ ಮತ್ತು ನಾಯಕತ್ವದ ಗುಣ ಬೆಳೆಸಿಕೊಂಡು ಸಮಾಜಮುಖಿಯಾಗಿ ದೇಶದ ಅಭಿವೃದ್ಧಿಗೆ ಕೈ ಜೋಡಿಸಬೇಕು. ಪಿಯು ಶಿಕ್ಷಣವನ್ನು ತಪಸ್ಸಿನ ರೀತಿಯಲ್ಲಿ ಮಾಡಿ ಸಾಧನೆಯೆಡೆ ಸಾಗಿ, ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಸದಸ್ಯೆ ಶಾರಕ್ಕ ಮಹಾಂತಶೆಟ್ಟರ, ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಜಯಲಕ್ಷ್ಮೀ ಗಡ್ಡದೇವರಮಠ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ಸುವರ್ಣಭಾಯಿ ಬಹದ್ದೂರದೇಸಾಯಿ ಮತ್ತು ಸದಸ್ಯೆ ರೋಹಿಣಿಭಾಯಿ ಬಹದ್ದೂರ್ದೇಸಾಯಿ, ಪ್ರಾಚಾರ್ಯೆ ಸರಸ್ವತಿ ಹುಲ್ಲಣ್ಣನವರ ಉಪಸ್ಥಿತರಿದ್ದರು.
ಈ ವೇಳೆ ಕಾಲೇಜಿನ ಉಪನ್ಯಾಸಕರಾದ ಎ.ಬಿ. ಮೂಲಿಮನಿ, ಡಿ.ಜೆ. ಕಟಗಿ, ಚೈತ್ರ ಮಳಲಿ, ಅಪರ್ಣ ರಾಯ್ಕರ, ನಿಂಗರಾಜ್ ಕುಂಬಾರ, ಜಗದೀಶ್ ದ್ಯಾಮಣ್ಣವರ್, ನಿವೃತ್ತ ಉಪನ್ಯಾಸಕರುಗಳಾದ ಎಸ್.ಎನ್. ಮಳಲಿ, ಎನ್.ಬಿ. ತಳ್ಳಳ್ಳಿ, ಎ.ಎನ್. ನಾವಿ, ಎಸ್.ಎಫ್. ಕೊಡ್ಲಿ ಹಾಜರಿದ್ದರು. ಎಸ್.ಬಿ. ಅಣ್ಣಿಗೇರಿ, ಎಸ್.ಎಂ. ವಿರಕ್ತಮಠ, ಜಗದೀಶ್ ಶಿರಹಟ್ಟಿ ನಿರೂಪಿಸಿದರು.