ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಾಧಿಸುವ ಮನಸ್ಸಿದ್ದರೆ ಬಡತನವೂ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ದೊಡ್ಡೂರ ತಾಂಡಾದ ಅನಿಲ ಲಮಾಣಿ ಜೀವಂತ ಉದಾಹರಣೆಯಾಗಿದ್ದಾನೆ.
ಹಾದಿಬೀದಿಯಲ್ಲಿ ಕಲ್ಲಂಗಡಿ ಹಣ್ಣು ಮಾರುವ ತಂದೆ ಹಾಗೂ ಕೂಲಿ ಕೆಲಸ ಮಾಡುವ ತಾಯಿಯ ಪುತ್ರನಾದ ಅನಿಲ, ಪಿಯುಸಿ ಪರೀಕ್ಷೆಯಲ್ಲಿ ಶೇ.85 ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾನೆ. ಮುಳಗುಂದದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿದ್ದ ಅನಿಲ ಉತ್ತಮ ಫಲಿತಾಂಶ ಗಳಿಸಿದ್ದಾನೆ.
ಆದರೆ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಆತಂಕ ಎದುರಾಗಿದೆ. ದೊಡ್ಡ ಕಾಲೇಜುಗಳಲ್ಲಿ ಓದಲು ಬೇಕಾದ ಹೆಚ್ಚಿನ ಶುಲ್ಕವನ್ನು ಭರಿಸಲು ಕುಟುಂಬದ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿಲ್ಲ.
ಪರೀಕ್ಷೆ ಮುಗಿದ ಕೂಡಲೇ ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಲ್ಲಂಗಡಿ ಹಣ್ಣು ಮಾರಾಟದಲ್ಲಿ ತೊಡಗಿಕೊಂಡಿರುವ ಅನಿಲ, ಬಿಸಿಲಿನಲ್ಲೂ ದುಡಿಯುತ್ತಲೇ ತನ್ನ ಶಿಕ್ಷಣದ ಕನಸನ್ನು ಮುಂದುವರಿಸುತ್ತಿದ್ದಾನೆ.
ಅನಿಲನ ತಮ್ಮ 10ನೇ ತರಗತಿಯಲ್ಲಿ ಓದುತ್ತಿದ್ದು, ತಂಗಿ ಅಂಗವಿಕಲೆಯಾಗಿದ್ದಾಳೆ. ಈ ನಡುವೆಯೂ ಮಗನನ್ನು ಓದಿಸಲು ಶಕ್ತಿಮೀರಿದ ಪ್ರಯತ್ನ ಮಾಡುವುದಾಗಿ ತಂದೆ ಮಲ್ಲೇಶಪ್ಪ ಹಾಗೂ ತಾಯಿ ತಿಳಿಸಿದ್ದಾರೆ.
ಅನಿಲ ಮಾತನಾಡಿ, “ನಾನು ಶೇ.85 ಅಂಕ ಪಡೆದಿದ್ದೇನೆ. ಆದರೆ ಸ್ಪರ್ಧೆ ಹೆಚ್ಚು ಇರುವುದರಿಂದ ಇದು ಸಾಕಾಗುವುದಿಲ್ಲ ಎನ್ನಿಸುತ್ತದೆ. ಕಲ್ಲಂಗಡಿ ಮಾರುತ್ತಲೇ ಸಿಇಟಿ ಮತ್ತು ನೀಟ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿದ್ದೇನೆ. ಅವಕಾಶ ಸಿಕ್ಕರೆ ವೈದ್ಯಕೀಯ ಶಿಕ್ಷಣ ಪಡೆಯಲು ಇಷ್ಟ, ಇಲ್ಲದಿದ್ದರೆ ಪೊಲೀಸ್ ಇಲಾಖೆಗೆ ಸೇರುವ ಆಸೆ ಇದೆ. ಯಾವುದೇ ಪರಿಸ್ಥಿತಿಯಲ್ಲೂ ಓದನ್ನು ಮುಂದುವರಿಸುತ್ತೇನೆ” ಎಂದು ಹೇಳಿದ್ದಾನೆ.



