ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ವಿದ್ಯಾರ್ಥಿಗಳು ಮೊಬೈಲ್ ಹಾಗೂ ದುಶ್ಚಟಗಳ ದಾಸರಾಗದೆ ಉತ್ತಮ ಜೀವನ ಕಟ್ಟಿಕೊಳ್ಳುವ ಕಡೆಗೆ ಗಮನ ವಹಿಸಬೇಕೆಂದು ಅರಸೀಕೆರೆ ಪಿಎಸ್ಐ ವಿಜಯಕೃಷ್ಣ ತಿಳಿಸಿದರು.
ತಾಲೂಕಿನ ಅರಸೀಕೆರೆ ಗ್ರಾಮದ ಎಸ್ಎಂಎಸ್ಕೆ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಸೈಬರ್ ಕ್ರೈಂ, ಬಾಲ್ಯ ವಿವಾಹ ತಡೆ, ಮಕ್ಕಳ ಸಂರಕ್ಷಣೆ ಮತ್ತು ಪೊಕ್ಸೋ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನವು ಅತ್ಯಂತ ಸುಂದರವಾದ್ದು. ಅದನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬೇಕು. ಶಿಸ್ತು-ಸಂಯಮ ಹಾಗೂ ಸಂಸ್ಕಾರ ಹೊಂದಿದ್ದರೆ ವಿದ್ಯೆಯು ತಾನಾಗಿಯೇ ಒಲಿಯುತ್ತದೆ. ಉತ್ತಮವಾದ ಗುರಿಯನ್ನು ಹೊಂದಿ ಜೀವನದಲ್ಲಿ ಯಶಸ್ಸನ್ನು ಪಡೆಯಿರಿ ಎಂದರು.
ಪುರುಷನಿಗೆ 21, ಮಹಿಳೆಯರಿಗೆ 18 ತುಂಬಿದ ನಂತರವೇ ಮದುವೆ ಮಾಡಬೇಕು. ಅದಕ್ಕೂ ಮುನ್ನ ಮಾಡಿದರೆ ಪೊಕ್ಸೋ ಕೇಸ್ ದಾಖಲಿಸಿ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಾಚಾರ್ಯ ಪಿ. ದುರುಗೇಶ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಕಾನೂನು ಉಲ್ಲಂಘನೆ ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಹಳ್ಳಿಯಲ್ಲಿ ತಂದೆ-ತಾಯಿಗಳ ಕಷ್ಟಗಳನ್ನು ಅರಿತು ಬಾಳುವವರು ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ ಮತ್ತು ಅಂತಹವರು ತಪ್ಪುಗಳನ್ನು ಮಾಡುವುದು ತುಂಬಾ ವಿರಳ ಎಂದರು.
ಈ ವೇಳೆ ಉಪನ್ಯಾಸಕರಾದ ಚಂದ್ರಪ್ಪ, ನಾಗರಾಜ, ವಿನಾಯಕ, ಪ್ರಭಾಕರ್, ಈಶಪ್ಪ, ಎ.ಎಚ್. ವಸಂತ್, ಪೊಲೀಸ್ ಸಿಬ್ಬಂದಿಗಳಾದ ರವಿನಾಯ್ಕ, ಹರೀಶ್, ಶಿಕ್ಷಕರಾದ ಪರಶುರಾಮ್, ಅಜ್ಜಯ್ಯ, ವಿದ್ಯಾರ್ಥಿಗಳು ಇದ್ದರು.



