ವಿಜಯಸಾಕ್ಷಿ ಸುದ್ದಿ, ನರೇಗಲ್ಲ/ಬೆಂಗಳೂರು: ರೈತ ನಮ್ಮ ಜೀವದ ಮತ್ತು ಜೀವನದ ಉಸಿರು. ಅವನಿಲ್ಲದಿದ್ದರೆ ನಾವು ತುತ್ತು ಅನ್ನಕ್ಕಾಗಿ ಪರದಾಡಬೇಕಾಗುತ್ತದೆ. ಈಗ ಕೃಷಿ ಮಾಡಲು ಯಾರೂ ಒಪ್ಪುತ್ತಿಲ್ಲ. ಎಲ್ಲರಿಗೂ ನೌಕರಿಯೇ ಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ಕೃಷಿಯೆಡೆಗೆ ಆಸಕ್ತಿ ಬೆಳೆಸಿಕೊಂಡು ಕೃಷಿಕರಾಗಲು ಮನಸ್ಸು ಮಾಡಬೇಕೆಂದು ಸಮೀಪದ ಸಾವಯವ ಕೃಷಿಕ ಕೋಟುಮಚಗಿ ಗ್ರಾಮದ ವೀರೇಶ ಎಸ್.ನೇಗಲಿ ಹೇಳಿದರು.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಸಮೀಪದ ಗಾನಹಳ್ಳಿಯ ಬಿ.ಎಸ್. ಕಾರ್ಮೆಲ್ ಶಾಲೆಯಲ್ಲಿ ನಡೆದ `ವಿದ್ಯಾರ್ಥಿಗಳ ನಡೆ ಕೃಷಿ ಕಡೆ’ ಕಾರ್ಯಕ್ರಮದಲ್ಲಿ ಅವರು ಸಾವಯವ ಕೃಷಿಯ ಕುರಿತು ಒಂದು ದಿನದ ಕಾರ್ಯಾಗಾರ ನಡೆಸಿ ಮಾತನಾಡಿದರು.
ಶಿಕ್ಷಣದಲ್ಲಿ ಸಾವಯವ ಕೃಷಿಗೆ ಪ್ರಥಮ ಆದ್ಯತೆ ನೀಡಿಬೇಕಾಗಿದೆ. ವಿದ್ಯಾರ್ಥಿಗಳು ಪ್ರಕೃತಿ ಮಡಿಲಿಗೆ ಹಿಂತಿರುಗುವಂತೆ ಪ್ರೇರೇಪಿಸಬೇಕಾಗಿದೆ. ಉತ್ತಮ ಶಿಕ್ಷಣ ಪಡೆದ ನಂತರ ಆಸ್ತಿ ಮಾಡುವ ಭರಾಟೆಯಲ್ಲಿ ಹಾಗೂ ಹಣದ ವ್ಯಾಮೋಹದಲ್ಲಿ ತೇಲುತ್ತಿರುವ ಯುವ ಜನಾಂಗಕ್ಕೆ ಉತ್ತಮ ಆರೋಗ್ಯ, ನೆಮ್ಮದಿ, ಪ್ರಕೃತಿ, ಮಣ್ಣು ಹಾಗೂ ಕೃಷಿ ಎನ್ನುವ ನಿಜವಾದ ಜಗತ್ತಿಗೆ ಹಿಂತಿರುಗಿಸುವ ಅನಿವಾರ್ಯತೆ ಇದೆ. ನಾವು ಕಲಿತ ಶಿಕ್ಷಣ ನಮ್ಮ ದೇಶಕ್ಕೆ, ನಮ್ಮ ಆರೋಗ್ಯಕ್ಕೆ ಉಪಯೋಗವಾದರೆ ಮಾತ್ರ ಅದರ ಮೌಲ್ಯ ಹೆಚ್ಚುತ್ತದೆ. ಇಲ್ಲವಾದರೆ ನೂರಾರು ವಿಕೋಪಕ್ಕೆ ಕಾರಣರಾಗುತ್ತೇವೆ ಎಂದರು.
ಈ ವೇಳೆ ಸಾವಯವ ಕೃಷಿ, ಫಲವತ್ತಾದ ಮಣ್ಣಿನ ಗುಣಮಟ್ಟ ಹಾಗೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿದ ಮಣ್ಣಿನ ಗುಣಮಟ್ಟದ ಕುರಿತು, ಧಾನ್ಯಗಳ ಕುರಿತು, ಬೆಳೆಗಳ ಕುರಿತು, ಸ್ವಾಭಾವಿಕ ನೀರಿನ ಕುರಿತು, ದೇಶಿ ಗೋವಿನ ಸಗಣಿ, ಗಂಜಲು ಹಾಗೂ ಇತರೆ ವಸ್ತುಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಗೀತಾ ರಕರಡ್ಡಿ, ಸಹ ಶಿಕ್ಷಕರಾದ ಶಿವಲಿಂಗಪ್ಪ ಎಂ, ಗಗನ್ ಎಂ, ತಾವೇರಪ್ಪ ಎಲ್, ಭಾಗ್ಯಲಕ್ಷ್ಮೀ ಕೆ.ಆರ್. ಇದ್ದರು.
ಶಾಲೆಯ ಪ್ರಾಚಾರ್ಯೆ ಜ್ಯೋತಿಗೌಡ ಕೆ.ಎಸ್. ಮಾತನಾಡಿ, ಉತ್ತರ ಕರ್ನಾಟಕದ ವೀರೇಶ ನೇಗಲಿಯವರು ಸಾವಯವ ಕೃಷಿಯಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಅವರ ಕಾರ್ಯಾಗಾರದಿಂದ ನಮ್ಮ ಮಕ್ಕಳಿಗೆ ಸ್ಪೂರ್ತಿ ಸಿಕ್ಕಿದೆ ಎಂದರು.



