ವಿಜಯಸಾಕ್ಷಿ ಸುದ್ದಿ, ಗದಗ: ಪ್ರತಿ ವರ್ಷದ ವಾರ್ಷಿಕ ಪರೀಕ್ಷೆ ಫಲಿತಾಂಶವನ್ನು ನೋಡಲಾಗಿ, ಇಂದಿನ ವಿದ್ಯಾರ್ಥಿಗಳು ಚೆನ್ನಾಗಿ ಅಂಕ ಗಳಿಸುತ್ತಾರೆ. ಇದು ಸಂತಸ-ಹೆಮ್ಮೆಯ ವಿಷಯವೇ. ಆದರೆ, ವಿನಯತೆಯು ತುಸು ಕುಂಠಿತವಾಗುತ್ತಿದೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳಲ್ಲಿ ವಿದ್ಯೆಯ ಜೊತೆಗೆ ವಿನಯವೂ ಬೇಕಾಗಿದೆ ಎಂದು ಸನ್ಮಾರ್ಗ ಪದವಿಪೂರ್ವ ಮಹಾವಿದ್ಯಾಲಯದ ನಿರ್ದೇಶಕ ಪ್ರೊ. ಪುನೀತ ದೇಶಪಾಂಡೆ ಅಭಿಪ್ರಾಯಪಟ್ಟರು.
ಸನ್ಮಾರ್ಗ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಪ್ರಥಮ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಜರುಗಿದ ಪಾಲಕರ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಕೆಲ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು, ರ್ಯಾಂಕ್ಗಳನ್ನು ನಿರೀಕ್ಷೆ ಮೀರಿ ಗಳಿಸುತ್ತಿದ್ದಾರೆ. ಆದರೆ ವಿನಯವಿಲ್ಲದ ವಿದ್ಯೆ, ಮಕರಂದವಿಲ್ಲದ ಹೂವಿನಂತೆಯೇ ಸರಿ. ಪಾಲಕ-ಶಿಕ್ಷಕರಾದ ನಾವು ಮೊದಲು ವಿದ್ಯಾರ್ಥಿಗಳಲ್ಲಿ ವಿನಯತೆಯನ್ನು, ನೀತಿ ಶಿಕ್ಷಣವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿ, ಪ್ರಾಥಮಿಕವೂ ಅಲ್ಲದ ಪದವಿ ವರ್ಗವೂ ಅಲ್ಲದ, ಈ ಮಧ್ಯದ ಟೀನೇಜ್ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡುವುದು ಉಪನ್ಯಾಸಕರಿಗೆ ದಿನ ನಿತ್ಯದ ಸವಾಲಿನ ಕೆಲಸವೇ. ಇಂದಿನ ವಿದ್ಯಾರ್ಥಿಗಳಲ್ಲಿ ಸಹನೆ, ತಾಳ್ಮೆ, ನೀತಿ ಶಿಕ್ಷಣದ ಕೊರತೆ ಇದೆ. ಇದನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ ಎಂದರು.
ಮಹಾವಿದ್ಯಾಲಯದ ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ ಮಾತನಾಡಿ, ಮಹಾವಿದ್ಯಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ, ಸರ್ಕಾರದಿಂದ ಕೊಡಲ್ಪಡುವ ಸ್ಕಾಲರ್ಶಿಪ್ಗಳ ಬಗ್ಗೆ ಸಮರ್ಪಕ ವಿವರಣೆ ನೀಡಿದರು.
ಹಿರಿಯ ಉಪನ್ಯಾಸಕ ಮುರಳೀಧರ ಸಂಕನೂರ ಸ್ವಾಗತಿಸಿದರೆ, ಪ್ರೊ. ಸಂತೋಷ ನಾಗರಾಳ ವಂದಿಸಿದರು. ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚೇರ್ಮನ್ ಪ್ರೊ. ರಾಜೇಶ ಕುಲಕರ್ಣಿ, ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್, ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



