ವಿಜಯಸಾಕ್ಷಿ ಸುದ್ದಿ, ಮುಳಗುಂದ: ವಿದ್ಯಾರ್ಥಿ ಜೀವನದಲ್ಲಿ ಬಂದ ಅವಕಾಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಟಾಟಾ ಕಂಪನಿಯ ಕ್ರಿಯೇಟಿವ್ ಇಂಜಿನಿಯರ್ ಮಹೇಶ ಬಿರಾದಾರ ಹೇಳಿದರು.
ಅವರು ಪಟ್ಟಣದ ಆರ್.ಎನ್. ದೇಶಪಾಂಡೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿ ಮಾತನಾಡಿ, ಇಂದು ಆಧುನಿಕತೆ ಬೆಳೆದಂತೆ ಉದ್ಯೋಗಾವಕಾಶಗಳಿಗೆ ಸಾಕಷ್ಟು ಮಾರ್ಗಗಳಿದ್ದು, ಟಾಟಾ ಟೆಕ್ನಾಲಜಿಸ್ಗೆ ಈಗಾಗಲೇ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರಸ್ತಾವ ಪತ್ರಗಳನ್ನು ನೀಡಲಾಗಿದೆ. ನಿಮ್ಮ ಪದವಿ ಮುಗಿದ ನಂತರ ನಮ್ಮ ಕಚೇರಿಗೆ ಭೇಟಿ ನೀಡಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಪ್ರಾಚಾರ್ಯ ಆರ್.ಎಂ. ಕಲ್ಲನಗೌಡರ ಮಾತನಾಡಿ, ಟಾಟಾ ಟೆಕ್ನಾಲಜಿಸ್ ಅವರು ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರತಿ ವರ್ಷ ಆಯ್ಕೆ ಮಾಡಿಕೊಂಡು ಉದ್ಯೋಗಾವಕಾಶಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಪ್ರಾಧ್ಯಾಪಕರಾದ ಮಾರುತಿ, ಕೆ.ಎಂ. ಶಿರೂರ, ಅನುಪಮಾ, ಕೆ.ಎನ್. ಕಡೆಮನಿ, ವಿಠಲ ಪವಾರ, ಕೆ.ವಸಂತಕುಮಾರ, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.



