ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕಲಿಕಾ ಸಾಮರ್ಥ್ಯಗಳು, ಆಸಕ್ತಿದಾಯಕ ಕ್ಷೇತ್ರಗಳು, ಕಲಿಕಾ ಶೈಲಿ ಹಾಗೂ ಮಗುವಿನ ಅಗತ್ಯಗಳು ಕಲಿಕೆಯ ಮೇಲೆ ನಿರಂತರ ಪ್ರಭಾವ ಬೀರುತ್ತವೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಯ ಬೌದ್ಧಿಕ ವಿಕಾಸಕ್ಕೆ ಸಹಕಾರಿ ಎಂದು ಸಂಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಹೇಳಿದರು.
ಅವರು ಗದುಗಿನ ಪಂ.ಪುಟ್ಟರಾಜ ಕವಿ ಗವಾಯಿಗಳವರ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ವೀರೇಶ್ವರ ಪುಣ್ಯಾಶ್ರಮ ಅಂಧ-ಅನಾಥರ ಬಾಳಿನ ಬಾಗ್ಯದ ಬಾಗಿಲು. ಇಲ್ಲಿ ಹಾಡುವ ಹಕ್ಕಿಗಳು ಸಾವಿರಾರು. ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಕ್ತ ಅವಕಾಶವನ್ನು ಶ್ರೀ ಮಠವು ಎಲ್ಲರಿಗೂ ಕಲ್ಪಿಸಿದ್ದು, ಇಲ್ಲಿ ಜ್ಞಾನಾರ್ಜನೆಗೈಯುತ್ತಿರುವ ಪ್ರತಿಯೊಬ್ಬರೂ ಸುದೈವಿಗಳು. ಮಕ್ಕಳು ಜ್ಞಾನದಾಹಿಗಳಾಗಿ ಇಲ್ಲಿ ಸಿಗುವ ಬದುಕಿನ ಎಲ್ಲ ಅನುಭವದ ಪಾಠಗಳನ್ನು ಕಲಿತು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇ.ಸಿ.ಓ ಐ.ಬಿ. ಮಡಿವಾಳರ ಮಾತನಾಡಿ, ಶಾಲೆಗಳು ಕುಟುಂಬದ ರೀತಿಯಲ್ಲಿ ಮಕ್ಕಳೊಂದಿಗೆ ಸಂಪರ್ಕ ಹೊಂದಿದಾಗ ಅಲ್ಲಿ ಆತ್ಮಿಯತೆಯು ಬೆಸೆದು ಮಕ್ಕಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವರು ಎಂದರು.
ಸಂಪನ್ಮೂಲ ವ್ಯಕ್ತಿ ಟಿ.ಎಸ್. ಹೂಗಾರ ಮಾತನಾಡಿ, ಶಾಲೆಗಳಲ್ಲಿ ಮಕ್ಕಳ ಬೌದ್ಧಿಕ ವಿಕಾಸ ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಒತ್ತು ನೀಡಲಾಗುತ್ತಿದೆ. ಪ್ರೋತ್ಸಾಹದಾಯಕವಾದ ವಾತಾವರಣ ಮಕ್ಕಳಿ ಸ್ಪೂರ್ತಿ ನೀಡುತ್ತದೆ ಎಂದರು.
ಅತಿಥಿಗಳಾಗಿ ಶಾಲಾ ಆಡಳಿತಾಧಿಕಾರಿ ಪಿ.ಸಿ. ಹಿರೇಮಠ ಹಾಗೂ ಆಡಳಿತ ಮಂಡಳಿಯ ಪ್ರಕಾಶ ಬಸರಿಗಿಡದ, ವೀರೇಶ್ವರ ಪುಣ್ಯಾಶ್ರಮದ ವ್ಯವಸ್ಥಾಪಕ ಹೇಮರಾಜ ಶಾಸ್ತ್ರಿಗಳು ಹಿರೇಮಠ, ಪುರಾಣ ಪ್ರವಚನಕಾರ ಫಕ್ಕೀರಯ್ಯ ಶಾಸ್ತಿçÃಗಳು ಹಿರೇಮಠ ಆಗಮಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನದೊಂದಿಗೆ ಪ್ರಶಸ್ತಿಪತ್ರಗಳನ್ನು ವಿತರಿಸಿ ಸಂದರ್ಭೋಚಿತವಗಿ ಮಾತನಾಡಿದರು.
ಪ್ರಾರಂಭದಲ್ಲಿ ಸಂದೀಪ ಹೂಗಾರ ಮತ್ತು ಕುಮಾರೇಶ ಹಿರೇಮಠ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಸಿದ್ಧಲಿಂಗೇಶ ಕರ್ಜಿಗನೂರ ವರದಿ ವಾಚಿಸಿದರು. ಎ.ಬಿ. ಸೊನ್ನದ ಸ್ವಾಗತಿಸಿದರು. ವಿ.ಎಂ. ವಾಲ್ಮೀಕಿ ಪರಿಚಯಿಸಿದರು. ರೇಣುಕಾ ಪಾಟೀಲ ನಿರೂಪಿಸಿದರು. ಕೊನೆಯಲ್ಲಿ ಎ.ಎಸ್. ಮುನೇನಕೊಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು, ಪಾಲಕ-ಪೋಷಕರಾದ ಪರಶುರಾಮ ಹುಬ್ಬಳ್ಳಿ, ಸಿಕಂದರ ವಾಲೀಕಾರ, ಮಂಜುಳಾ ಜಾಧವ, ಮಲ್ಲಮ್ಮ ಗೌಡರ, ರಜನಿಕಾಂತ ಶಿಲ್ಪಿ, ಕುಮಾರೇಶ ತುಪ್ಪದ, ಶರಣಪ್ಪಗೌಡ ಕರಕನಗೌಡ್ರ, ಮಂಜುನಾಥ ಗೌಡರ, ರುದ್ರಯ್ಯ ಹಿರೇಮಠ ಮುಂತಾದವರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಕೆ.ಬಿ. ಹಿರೇಮಠ ವಹಿಸಿ ಮಾತನಾಡಿ, ಪ್ರಾಥಮಿಕ ಹಂತವು ಮಗುವಿನ ಭವಿಷ್ಯದ ಅಡಿಗಲ್ಲು. ಈ ಶಾಲೆಯ ಮಕ್ಕಳು ರಾಜ್ಯದ ಮೂಲೆ-ಮೂಲೆಯಿಂದ ಪುಣ್ಯಾಶ್ರಮಕ್ಕೆ ಬಂದು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ಯೋಗಕ್ಷೇಮ-ಶೈಕ್ಷಣಿಕ ಪ್ರಗತಿಯತ್ತ ನಾವೆಲ್ಲರೂ ಗಮನ ಹರಿಸಿ ಮಕ್ಕಳ ಕ್ಷೇಮಾಭಿವೃದ್ಧಿಯನ್ನೇ ನಮ್ಮೆಲ್ಲರ ಗುರಿಯಾಗಿಸಿಕೊಂಡಿದ್ದೇವೆ ಎಂದರು.