ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿಯೂ ಸಾಧನೆ ಮಾಡಬೇಕೆಂಬ ಛಲ, ಸತತ ಪ್ರಯತ್ನ ಇರಬೇಕು ಎಂದು ಗದಗ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಷ ಬೆಟದೂರ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್ಎಂಎಸ್ಎ)ಯಲ್ಲಿ 2024/25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳು ಗುರುಗಳು ಹೇಳುವ ಪ್ರತಿಯೊಂದು ವಿಷಯವನ್ನು ಗಮನವಿಟ್ಟು ಕಲಿಯಬೇಕು, ಸತತ ಪ್ರಯತ್ನಶೀಲರಾಗಿರಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ, ಗುರಿ ಮುಟ್ಟುವ ಛಲ ಹೊಂದಿದಾಗ ಸಾಧನೆ ಸುಲಭವಾಗುತ್ತದೆ ಎಂದರು.
ಪ್ರಧಾನ ಗುರು ಎಸ್.ಎಚ್. ಪೂಜಾರ ಮಾತನಾಡಿ, ಬಿ.ಜಿ. ಅಣ್ಣಿಗೇರಿ ಗುರುಗಳು ತಮ್ಮ ಜೀವನವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದರು. ಇಂತಹ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದಾಗ ಸಾಧನೆಯ ಶಿಖರವನ್ನು ಏರಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಮಾಹಾದೇವಪ್ಪಾ ಮಾನೇಗಾರ ವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಶಿವಾನಂದ ಕತ್ತಿ, ಜಿ.ಎಂ. ಪಿರಂಗಿ, ನೇಹಾ, ಸುಧಾರಾಣಿ, ವೀರೇಶ ಗಂಜಿ, ನೂರಹ್ಮದ ನದಾಫ್, ಗೀತಾ ಪಾಟೀಲ, ವಿ.ಟಿ. ಅಂಗಡಿ, ಎಲ್.ಡಿ. ರಾಠೋಡ, ಎಸ್.ವಿ. ತಿಮ್ಮಾಪೂರ, ಜಿ.ಆರ್. ಕುಂದರಗಿ, ಬಸವರಾಜ ಗೌರಿಮನಿ ಇದ್ದರು.