ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದಲ್ಲಿರುವ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಸಭಾಗೃಹದಲ್ಲಿ ಎಸ್ಎಸ್ಕೆ ಸಮಾಜ ಮಹಿಳಾ ಮಂಡಳ, ಎಸ್.ಎಸ್.ಕೆ. ಸಮಾಜ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ, ಜಿಮ್ಸ್ ಆಸ್ಪತ್ರೆ ಹಾಗೂ ಗದಗ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಿ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು.
ಈ ಶಿಬಿರದಲ್ಲಿ 250ಕ್ಕೂ ಹೆಚ್ಚು ರೋಗಿಗಳಿಗೆ ನೇತ್ರ ತಪಾಸಣೆ ಮಾಡಲಾಯಿತು. 21 ಜನರಿಗೆ ಕಣ್ಣಿನ ಪೊರೆ ಶಸ್ತçಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. 102 ಜನರಿಗೆ ಕನ್ನಡಕ ವಿತರಿಸಲಾಯಿತು. ಇನ್ನುಳಿದವರಿಗೆ ಐಸಿಟಿಸಿ, ಎಚ್.ಬಿ.ಸಿ.ಜಿ., ಬಿ.ಪಿ ಹಾಗೂ ಸಕ್ಕರೆ ಖಾಯಿಲೆ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಲಾಯಿತು. ಶಿಬಿರದಲ್ಲಿ ಡಾ. ವರುಣ, ಡಾ. ಅಟಲ್, ನೇತ್ರ ಸಹಾಯಕ ಅಧಿಕಾರಿ ಮಂಜುನಾಥ ದೊಡ್ಡಮನಿ ಹಾಗೂ ಸಿಬ್ಬಂದಿಗಳೊಂದಿಗೆ ನೇತ್ರ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ಎಸ್ಎಸ್ಕೆ ಸಮಾಜದ ಪಂಚ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಮಾತನಾಡಿ, ಮಣ್ಣಿನಲ್ಲಿ ಮಣ್ಣಾಗುವ ಮುನ್ನ ನೇತ್ರಗಳನ್ನು ದಾನ ಮಾಡಿ ಇನ್ನೊಬ್ಬರ ಬಾಳಿನಲ್ಲಿ ಬೆಳಕಾಗಬೇಕು. ಅದೇ ರೀತಿ ರಕ್ತದಾನ ಮಾಡಿ ಇನ್ನೊಬ್ಬರಿಗೆ ಜೀವದಾನ ಮಾಡಿ ದೇವರು ನೀಡಿದ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಹೇಳಿದರು.
ಮಹಿಳಾ ಮಂಡಳದ ಉಪಾಧ್ಯಕ್ಷೆ ಸ್ನೇಹಲತಾ ಕಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್ಎಸ್ಕೆ ಸಮಾಜವು ಹೆಚ್ಚು ಸಂಘಟಿತರಾಗಿ ಇಂತಹ ಸಮಾಜಸೇವೆಗಳನ್ನು ಮಾಡಲು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಪಂಚ ಟ್ರಸ್ಟ್ ಕಮಿಟಿ ಸದಸ್ಯರಾದ ಪರಶುರಾಮಸಾ ಬದಿ, ನಾಗೇಶ ಖೋಡೆ, ರೇಖಾ ಬೇವಿನಕಟ್ಟಿ, ಗೀತಾ ಹಬೀಬ, ಕಸ್ತೂರಿಬಾಯಿ ಬಾಂಡಗೆ, ಸುನಂದಾ ಹಬೀಬ, ಲಲಿತಾಬಾಯಿ ಬಾಕಳೆ, ಸರೋಜಾಬಾಯಿ ಟಿಕಣದಾರ, ರೇಣುಕಾಬಾಯಿ ಕಲಬುರ್ಗಿ, ರತ್ನಾಬಾಯಿ ಹಬೀಬ, ವಂದನಾ ಶಿದ್ಲಿಂಗ, ಶಾಂತಾಬಾಯಿ ಬಾಕಳೆ, ಹೇಮಾ ಬೇವಿನಕಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸುಶೀಲಾಬಾಯಿ ಶಿದ್ಲಿಂಗ, ಪ್ರಾರ್ಥಿಸಿದರು. ನಾಗೇಶ ಖೋಡೆ ಸ್ವಾಗತಿಸಿದರು. ಶ್ರೀಕಾಂತ ಬಾಕಳೆ ನಿರೂಪಿಸಿದರು. ಆರ್.ಟಿ. ಕಬಾಡಿ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಎಸ್ಕೆ. ಸಮಾಜದ ಮಹಿಳಾ ಮಂಡಳದ ಅಧ್ಯಕ್ಷೆ ಉಮಾ ಬೇವಿನಕಟ್ಟಿ ಮಾತನಾಡಿ, ಕಣ್ಣುಗಳಿಲ್ಲದೆ ಈ ಜಗತ್ತನ್ನು ನೋಡಲು ಸಾಧ್ಯವಿಲ್ಲ. ಅಂತಹ ಜಗತ್ತನ್ನು ನೋಡಲು ನಾವು ಇನ್ನೊಬ್ಬರಿಗೆ ಕಣ್ಣಾಗಬೇಕು ಮತ್ತು ಜಗತ್ತಿನಲ್ಲಿ ಕೃತಕವಾಗಿ ರಕ್ತವನ್ನು ತಯಾರು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಾವು ಆರೋಗ್ಯವಂತರಾಗಲು ಮತ್ತು ಇನ್ನೊಬ್ಬರಿಗೆ ಜೀವದಾನ ಮಾಡಲು ರಕ್ತದಾನ ಮಾಡಬೇಕು ಎಂದು ಹೇಳಿದರು.