ಕಲಾಸಿಪಾಳ್ಯದ ಸುಧಾಹರನ್ ಹತ್ಯೆ ಕೇಸ್: ಆರೋಪಿ ವಿಚಾರಣೆ ವೇಳೆ ಹಲವು ಸಂಗತಿ ಬೆಳಕಿಗೆ

0
Spread the love

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಕಲಾಸಿಪಾಳ್ಯದ ಸುಧಾಹರನ್ ಹತ್ಯೆ ಪ್ರಕರಣ ಸಂಬಂಧ ವಿಜಯ್ ಕುಮಾರ್ ಎಂಬಾತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Advertisement

ವಿಚಾರಣೆ ವೇಳೆ ಆರೋಪಿ ವಿಜಯ್ ಕುಮಾರ್ ಅಸಲಿ ಸತ್ಯ ಬಾಯ್ಬಿಟ್ಟಿದ್ದಾರೆ. ಪತ್ನಿಯ ಜತೆ ಅಕ್ರಮ ಸಂಬಂಧ ಇಟ್ಟುಕೊಂಡ ಹಾಗೂ ಆಕೆಗೆ ಬೇರೊಬ್ಬನ ಜತೆ ಮದುವೆ ಮಾಡಿಸಿದ್ದರಿಂದ ಆಕ್ರೋಶಗೊಂಡ ಆರೋಪಿ, ಸುಧಾಹರನ್ ಎಂಬಾತನನ್ನು ಹತ್ಯೆ ಮಾಡಿದ್ದ. ನಂತರ ಸುಟ್ಟು ಹಾಕಿ ಪರಾರಿಯಾಗಿದ್ದ.

ಸುಧಾಹರನ್ ಅಲಿಯಾಸ್ ಕುಳ್ಳ ಎನ್ನುವವನನ್ನು ಈತ ಮರ್ಡರ್ ಮಾಡಿದ್ದಾನೆ. ಸುಧಾಹರನ್ ಮತ್ತು ವಿಜಯ್ ಕುಮಾರ್ ಸ್ನೇಹಿತರಾಗಿದ್ದು, ಇಬ್ಬರೂ ಕಲಾಸಿಪಾಳ್ಯದ ತರಕಾರಿ ಮಾರ್ಕೆಟ್‌ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.

ವಿಜಯ್ ಕುಮಾರ್ ಮದ್ಯ ಮತ್ತು ಸಿಗರೇಟ್ ಸೇದುವ ಚಟಕ್ಕೆ ಬಿದ್ದಿದ್ದ. ಇದರಿಂದ 2015ರಲ್ಲಿ‌ ವಿಜಯ್‌ನನ್ನು ಆತನ ತಾಯಿ ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದ್ದರು. 11 ತಿಂಗಳು ಮದ್ಯವರ್ಜನ ಕೇಂದ್ರದಲ್ಲಿ ಬಂದಿಯಾಗಿದ್ದ ವಿಜಯ್ ಕುಮಾರ್. ಈ ವೇಳೆ ವಿಜಯ್ ಪತ್ನಿ ನಂದಿನಿಗೆ ಸುಧಾಹರನ್ ಬೇರೊಬ್ಬನ ಜತೆಗೆ ಮದುವೆ ಮಾಡಿಸಿದ್ದ.

ಮದ್ಯವರ್ಜನ ಕೇಂದ್ರದಿಂದ ಹೊರಬಂದಿದ್ದ ವಿಜಯ್‌ಗೆ ಇದರಿಂದ ಶಾಕ್ ಆಗಿತ್ತು. ಪತ್ನಿ‌ಗೆ ಬೇರೆ ಮದುವೆಯಾಗಿ ಹೋಗಿದ್ದರಿಂದ ಆತ ಡಿಪ್ರೆಶನ್‌ಗೆ ಹೋಗಿದ್ದ. ಈ ವಿಚಾರವಾಗಿ ಹಲವು ಬಾರಿ ಸುಧಾಹರನ್‌ನೊಂದಿಗೆ ಜಗಳವಾಡಿದ್ದ. ನಾಲ್ಕು ತಿಂಗಳ ಹಿಂದೆ ತನ್ನ ಪತ್ನಿ ನಂದಿನಿ ಮತ್ತು ಆನಂದ್ ಎಲ್ಲಿದ್ದಾರೆ ಎಂದು ಕೇಳಿದ್ದ. ಈ ವೇಳೆ ಆನಂದ್‌ಗೆ ಸುಧಾಹರನ್ ಫೋನ್ ಮಾಡಿದ್ದ. ಆಗ ಆನಂದ್ ಮತ್ತು ನಂದಿನಿ ಫೋನ್ ರಿಸೀವ್ ಮಾಡಿರಲಿಲ್ಲ.

ಇದರಿಂದ ಸುಧಾಹರನ್ ಮೇಲೆ ದ್ವೇಷ ಸಾಧಿಸಿದ್ದ ವಿಜಯ್, ತನ್ನ ಹೆಂಡತಿಗೆ ಮತ್ತೊಂದು ಮದುವೆ ಮಾಡಿಸಿ ಮೋಸ ಮಾಡಿದ್ದಿ ಎಂದು ಪದೇ ಪದೆ ಜಗಳ ಕಾಯುತ್ತಿದ್ದ. ಕೊನೆಗೆ ಸುಧಾಹರನ್ ಹತ್ಯೆ ಮಾಡಲು ನಿರ್ದರಿಸಿದ್ದ. ನವಂಬರ್ 11ರಂದು ಕಲಾಸಿಪಾಳ್ಯ ಮಾರ್ಕೆಟ್‌ನಲ್ಲಿ ಸುಧಾಹರನ್‌ನನ್ನು ಭೇಟಿಯಾಗಿ ತನ್ನ ಬಳಿ ಇದ್ದ ಒಂದೂವರೆ ಕ್ವಾರ್ಟರ್ ಮದ್ಯದ ಬಾಟಲು ನೀಡಿದ್ದ. ನನಗೆ ಆರೋಗ್ಯ ಸರಿಯಿಲ್ಲ ನೀನೇ ಕುಡಿಯೆಂದು ಸುಧಾಹರನ್‌ಗೆ ಮನವೊಲಿಸಿದ್ದ.

ನಂತರ ಸುಧಾಹರನ್‌ಗೆ ಮತ್ತೊಂದು ಕ್ವಾರ್ಟರ್ ಮದ್ಯ ಕುಡಿಸಿ, ಮಧ್ಯಾಹ್ನ 12 ಗಂಟೆಗೆ ವಿಶ್ರಾಂತಿ ಮಾಡೋಣ ಬಾ ಎಂದು‌ ತರಕಾರಿ ಮಾರ್ಕೆಟ್ ಮೇಲ್ಛಾವಣಿಗೆ ಕರೆದುಕೊಂಡು ಹೋಗಿದ್ದ. ನನ್ನ ಬಳಿ ಇದ್ದ 140 ರೂಪಾಯಿ ಕದ್ದಿದ್ದೀ ಎಂದು ಜಗಳ ತೆಗೆದಿದ್ದ. ಇದರಿಂದ ಮಾತಿಗೆ ಮಾತು ಬೆಳೆದು ಸಿಟ್ಟಿನಿಂದ ವಿಜಯ್ ಕಪಾಳಕ್ಕೆ ಸುಧಾಹರನ್ ಹೊಡೆದಿದ್ದ. ನಂತರ ವಿಜಯ್‌ ತನ್ನ ಬಳಿ ಇದ್ದ ಹಣ್ಣು ಕತ್ತರಿಸುವ ಚಾಕಿನಿಂದ ಸುಧಾಹರನ್ ಕುತ್ತಿಗೆಗೆ ಚುಚ್ಚಿದ್ದ.

ಈ ವೇಳೆ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದ ಸುಧಾಹರನ್. ಶವದ ಗುರುತು ಸಿಗದಂತೆ ಮಾಡಲು ಗೋಣಿಚೀಲ ಸುತ್ತಿ ಬೆಂಕಿ ಹಾಕಿ ವಿಜಯ್‌ ಎಸ್ಕೇಪ್ ಆಗಿದ್ದ. ವಿಚಾರಣೆಯಿಂದ ಸಾಕಷ್ಟು ವಿಚಾರ ಬೆಳಕಿಗೆ ಬಂದಿದೆ.


Spread the love

LEAVE A REPLY

Please enter your comment!
Please enter your name here