ವಿಜಯಸಾಕ್ಷಿ ಸುದ್ದಿ, ಡಂಬಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಕಬ್ಬು ಬೆಳೆ ಆಹುತಿಯಾದ ಘಟನೆ ಡಂಬಳ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಗ್ರಾಮದ ಪ್ರಕಾಶ ರೇವಣಸಿದ್ಧಪ್ಪ ಪಲ್ಲೇದ ಅವರಿಗೆ ಸೇರಿದ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದಿದೆ. ಅಂದಾಜು 3 ಎಕರೆ ಕಬ್ಬಿನ ಬೆಳೆಯಲ್ಲಿ 2 ಎಕರೆಯಷ್ಟು ಬೆಂಕಿಗಾಹುತಿಯಾಗಿದೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟು ಬೆಂಕಿ ನಂದಿಸಿದರು.
ಬೀಜ, ಗೊಬ್ಬರ, ಕೂಲಿ ಸೇರಿ ಅಂದಾಜು 1 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿ ಕಬ್ಬು ಬೆಳೆಯಲಾಗಿತ್ತು. ಕಟಾವಿಗೆ ಬಂದ ಬೆಳೆ ಬೆಂಕಿಗಾಹುತಿಯಾಗಿರುವುದು ರೈತನನ್ನು ಚಿಂತೆಗೀಡು ಮಾಡಿದೆ. ಕಬ್ಬಿನ ಬೆಳೆಯ ಪಕ್ಕವೇ ಟಿ.ಸಿ ಮತ್ತು ವಿದ್ಯುತ್ ಲೈನ್ ಹಾದು ಹೋಗಿದೆ. ವಿದ್ಯುತ್ ತಂತಿಯ ಲೈನ್ ಎತ್ತರಿಸುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ, ಯಾರೊಬ್ಬರೂ ಸ್ಪಂದಿಸಲಿಲ್ಲ. ಈಗ ಕೈ ಸೇರಬೇಕಿದ್ದ ಕಬ್ಬು ವಿದ್ಯುತ್ ಅವಘಡದಿಂದ ನಾಶವಾಗಿದ್ದು, ಸೂಕ್ತ ಪರಿಹಾರವನ್ನು ಕೊಡಬೇಕೆಂದು ರೈತ ಪ್ರಕಾಶ ಪಲ್ಲೇದ ಮನವಿ ಮಾಡಿದರು
ಅಗ್ನಿಶಾಮಕ ಠಾಣಾಧಿಕಾರಿ ರವಿಕುಮಾರ ಚವಡಿ, ಸಿಬ್ಬಂದಿಗಳಾದ ಎನ್.ವಿ. ಸೀಮಿಕೇರಿ, ಶಿನಗೌಡ ಕೆಂಚನಗೌಡ, ಪಿ.ಡಿ. ಕಬ್ಬರಗಿ, ಶಿವಕುಮಾರ ಕಿಳ್ಳಿಕೇತು, ಸುಮಂತಕುಮಾರ, ಪುನೀತ ಸೇರಿದಂತೆ ರೈತರು, ಗ್ರಾಮದ ಯುವಕರು ಇದ್ದರು.
ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ ಕಬ್ಬು ಬರುತ್ತಿಲ್ಲ. ಇದರಿಂದ ಕಬ್ಬಿಗೆ ವಿಮೆ ಸಿಗುವುದಿಲ್ಲ. ಕಬ್ಬಿನ ಬೆಳೆಯನ್ನು ಫಸಲ್ ಭಿಮಾ ವ್ಯಾಪ್ತಿಗೆ ತರಬೇಕು. ಬೆಂಕಿ ಅವಘಡ ಸಂಭಿಸಿದಾಗ ನಷ್ಟಕ್ಕೆ ಹೆಸ್ಕಾಂ ಹಾಗೂ ಸಕ್ಕರೆ ಕಾರ್ಖಾನೆಯವರು ಪರಿಹಾರ ನೀಡಬೇಕು.
– ನಿಂಗಪ್ಪ ಪಲ್ಲೇದ.
ಗ್ರಾ.ಪಂ ಸದಸ್ಯ, ಡಂಬಳ.