ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳಿಗೆ ಧರ್ಮಸ್ಥಳ ಸಂಘವು ಜೀವನಾಡಿಯಾಗಿದೆ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ಪಟ್ಟಣದ ಟಿಎಂಇ ಬಿಎಡ್ ಕಾಲೇಜು ಸಭಾಂಗಣದಲ್ಲಿ ಧರ್ಮಸ್ಥಳ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಕೊಡಮಾಡುವ ಸುಜ್ಞಾನನಿಧಿ ಶಿಷ್ಯವೇತನ ಚೆಕ್ ನೀಡಿ ಮಾತನಾಡಿದರು.
ಡಾ. ವೀರೇಂದ್ರ ಹೆಗ್ಗಡೆಯವರು ರಾಜ್ಯದ ಪ್ರತಿ ಗ್ರಾಮಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಏಳ್ಗೆಗಾಗಿ ಸಂಘದ ವತಿಯಿಂದ ಸಾಕಷ್ಟು ಸಹಕಾರ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಸಂಘದಿಂದ ಸಾಲ ಸೌಲಭ್ಯಗಳ ಸಹಕಾರದೊಂದಿಗೆ ಸ್ವಾವಲಂಬಿ ಜೀವನವನ್ನು ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ಅಂತೆಯೇ, ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಶಿಷ್ಯ ವೇತನದ ಸಹಕಾರ ನೀಡುತ್ತಿದ್ದಾರೆ. ಅದರ ಸದುಪಯೋಗ ಪಡೆದು ಉನ್ನತ ಶಿಕ್ಷಣ ಪಡೆಯಿರಿ ಎಂದರು.
ಧರ್ಮಸ್ಥಳ ಸಂಘದ ಜಿಲ್ಲಾ ಯೋಜನಾಧಿಕಾರಿ ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕರ ಮಾಸಾಶನ, ದೇವಸ್ಥಾನಗಳ ಜೀರ್ಣೋದ್ಧಾರ, ಗಿಡಗಳ ವಿತರಣೆ, ಸರ್ಕಾರಿ ಶಾಲೆಗಳಿಗೆ ಬೆಂಚ್ ವಿತರಣೆ, ಪ್ರಗತಿ ರಕ್ಷಾ ಸೌಲಭ್ಯಗಳು ಸೇರಿದಂತೆ ನಮ್ಮ ಸಂಸ್ಥೆ ವತಿಯಿಂದ ನಾಡಿನಾದ್ಯಂತ ದೀನ-ದಲಿತರ, ಬಡ-ನಿರ್ಗತಿಕರ ಹಾಗೂ ಬಡ ವಿದ್ಯಾರ್ಥಿಗಳ ಏಳ್ಗೆಯೇ ಸಂಘದ ಧ್ಯೇಯವಾಗಿದೆ ಎಂದರು.
ಪಿಎಸ್ಐ ಶಂಭುಲಿಂಗಯ್ಯ ಎಸ್.ಹಿರೇಮಠ, ಮಂಜುನಾಥ ಗುಂಡಗತ್ತಿ, ಮತ್ತೂರು ಬಸವರಾಜ, ಶೈಲಜಾ, ಕೊಟ್ರೇಶ್, ವಿಜಯ್ ಕುಮಾರ್ ಮುಂತಾದವರಿದ್ದರು.