ವಿಜಯಸಾಕ್ಷಿ ಸುದ್ದಿ, ಗದಗ : ಸಕಲ ಜೀವರಾಶಿಗಳಲ್ಲಿ ಮಾನವ ಜನ್ಮ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಮಾನವ ಮಹಾ ಮಾನವನಾಗಬೇಕಾದರೆ ಭಕ್ತಿ, ಜ್ಞಾನ, ವೈರಾಗ್ಯದ ಭಾವವನ್ನು ಹೊಂದಬೇಕು. ಇದಕ್ಕೆ ಪುರಾಣ, ಪುಣ್ಯಕತೆಗಳು, ಪ್ರವಚನಗಳು ಪೂರಕವಾಗಿವೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಡಾ.ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಹಿರೇಮಠದ ಭಕ್ತರು ಹಾಗೂ ಶ್ರೀಗುರು ಸಾಂಸ್ಕೃತಿಕ ಶಿವಾನುಭವ ಸಮಿತಿ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮೆ ನಿಮಿತ್ತ ಏರ್ಪಡಿಸಿರುವ ಸುಕ್ಷೇತ್ರ ಘತ್ತರಗಾ ಭಾಗ್ಯವಂತಿ ದೇವಿಯ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಅಜ್ಞಾನದ ಕತ್ತಲೆಯನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಪಡೆಯಬೇಕಾದರೆ ಪುರಾಣ, ಪ್ರವಚನ, ಸಂಗೀತವನ್ನು ಆಲಿಸಬೇಕೆಂದರು.
ಮುಖ್ಯ ಅತಿಥಿ ಪ್ರಭಯ್ಯ ಹಿರೇಮಠ ಮಾತನಾಡಿ, ಗ್ರಾಮದ ಗುರು-ಹಿರಿಯರು ಕೂಡಿಕೊಂಡು ಪ್ರವಚನ ಪ್ರಾರಂಭಿಸಿದ್ದು ಸಂತೋಷದ ಸಂಗತಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸಯ್ಯ ಹಿರೇಮಠ ಮಾತನಾಡಿದರು. ಸಿದ್ಧೇಶ್ವರ ಶಾಸ್ತ್ರೀಗಳು ತೆಲ್ಲೂರ ಅವರಿಂದ ಪ್ರವಚನ, ವಿನಯಕುಮಾರ ಹಿರೇಮಠ ಹಾಗೂ ವೀರೇಶ ಹಿರೇಮಠ ಸಂಗೀತ ಜರುಗಿತು. ಈರಣ್ಣ ಗೌಡರ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.