ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮಗುವಿನಲ್ಲಿರುವ ವಿಶ್ವ ಮಾನವತೆಯನ್ನು ಜತನದಿಂದ ಕಾಯ್ದುಕೊಂಡು ಹೋಗಲು ಅವರನ್ನು ಸಹಜವಾಗಿ ಬೆಳೆಯುವ ಹಾಗೆ ನೋಡಿಕೊಳ್ಳಬೇಕು. ಅಂತಹ ಸಹಜತೆಯನ್ನು ಇಂತಹ ಶಿಬಿರವು ಕಲ್ಪಿಸಿಕೊಡುತ್ತದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ ಅಭಿಪ್ರಾಯಪಟ್ಟರು.
ಅವರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-4ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಚೈತ್ರದ ಚಿಗುರು’ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿಶ್ರಾಂತ ಶಿಕ್ಷಕ, ಸಾಹಿತಿ ಸಿ.ಜಿ. ಹಿರೇಮಠ, ಸಹಜ ಕಲಿಕೆಯತ್ತ ಮಕ್ಕಳು ಮುಖ ಮಾಡಬೇಕು. ಆಡಿ ಕಲಿ-ಮಾಡಿ ತಿಳಿ ಎಂಬ ತತ್ವವನ್ನು ಆಧರಿಸಿದ ಶಿಕ್ಷಣ ವ್ಯವಸ್ಥೆ ಬರಬೇಕು. ಈ ಶಿಬಿರದಲ್ಲಿ ಅಂತಹ ತತ್ವವನ್ನು ಆಧರಿಸಿ ಚಟುವಟಿಕೆಗಳು ರೂಪುಗೊಂಡಿರುವುದು ಅನುಕರಣನೀಯ ಎಂದರು.
ತಾಲೂಕಾ ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸಾಹಿತ್ಯ ವಿಭಾಗದ ಆರ್.ಎಸ್. ಪಾಟೀಲ, ಚಿತ್ರಕಲಾ ವಿಭಾಗದ ಪ್ರವೀಣ ಗಾಯಕರ, ಕ್ರಾಫ್ಟ್ ವಿಭಾಗದ ರಾಜೇಶ್ ಉಮಚಗಿ, ಸಂಗೀತ ವಿಭಾಗದ ವಿ.ಎಂ. ಹೂಗಾರರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಲೆಯ ಮುಖ್ಯೋಪಾಧ್ಯಾಯ ಹೆಚ್.ಬಿ. ಸಣ್ಣಮನಿ, ವಿಶ್ರಾಂತ ಮುಖ್ಯ ಗುರುಮಾತೆ ಡಿ.ಎಫ್. ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಚ್.ಎಂ. ಗುತ್ತಲ, ಡಾ. ಅರ್ಜುನ ವಠಾರ, ಈರಣ್ಣ ಗಾಣಿಗೇರ, ಬಿ.ಬಿ. ದನದಮನಿ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅಮೋಘ ಹರಕುಣಿ ಪ್ರಾರ್ಥಿಸಿದನು. ಕಸಾಪ ತಾಲೂಕಾ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ನಿರ್ಮಲ ಅರಳಿ ವಂದಿಸಿದರು.
ಈ ಶಿಬಿರದಲ್ಲಿ ಮಕ್ಕಳೇ ಸ್ವತಃ ಕವಿತೆ ರಚಿಸಿ ಕವಿಗೋಷ್ಠಿ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ತಾವೇ ಚಿತ್ರ ಬರೆದು ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದು ಮನಸೆಳೆಯುವಂತಿತ್ತು. ಕಥಾ ರಚನೆ, ಮೋಜಿನ ಆಟಗಳು, ಮನೆಯಲ್ಲೇ ಮಾಡಬಹುದಾದ ಸರಳ ಕ್ರಾಫ್ಟ್ ಚಟುವಟಿಕೆಗಳು, ಮಾದರಿಗಳು ಪ್ರದರ್ಶನಗೊಂಡವು.