ವಿಜಯಸಾಕ್ಷಿ ಸುದ್ದಿ, ಗದಗ: ನಿರುದ್ಯೋಗಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ಉದ್ದೇಶದಿಂದ ಹುಬ್ಬಳ್ಳಿ ನಗರದ ರೈಬರ್ ಫೌಂಡೇಶನ್ ಹಾಗೂ ಸಫಾ ಬೈತೂಲ್ ಮಾಲ್ ವತಿಯಿಂದ ನಿರುದ್ಯೋಗಿಗಳಿಗೆ ತಳ್ಳುಗಾಡಿಗಳನ್ನು ನೀಡುವ ಮೂಲಕ ಸ್ವಾವಲಂಬಿ ಜೀವನಕ್ಕೆ ಬೆಂಬಲ ನೀಡಿದರು.
ಇಲ್ಲಿನ ಜೆ.ಪಿ. ನಗರದ ಮದನಿ ಕಾಲೋನಿಯ ನ್ಯೂ ದಾನಿಶ್ ಸ್ಕೂಲ್ ಮೈದಾನದಲ್ಲಿ ಫೌಂಡೇಶನ್ ಅಧ್ಯಕ್ಷ ಆರೀಫ್ ರಾಯಚೂರು ನೇತೃತ್ವದಲ್ಲಿ ನಗರದ ವಿವಿಧ ಭಾಗದ ನಿರುದ್ಯೋಗಿಗಳಿಗೆ 50 ತಳ್ಳುಗಾಡಿಗಳನ್ನು ವಿತರಿಸಿದರು.
ಫೌಂಡೇಶನ್ ಈಗಾಗಲೇ ಸರ್ವೆ ಕಾರ್ಯ ನಡೆಸಿ, ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಿ, ಬಂಡವಾಳ ಸಮೇತವಾಗಿ 20 ತಳ್ಳುಗಾಡಿಗಳನ್ನು ತರಕಾರಿ, 20 ತಳ್ಳುಗಾಡಿಗಳನ್ನು ಹಣ್ಣು ಮಾರಾಟಕ್ಕೆ ಹಾಗೂ 10 ತಳ್ಳು ಗಾಡಿಗಳನ್ನು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟಕ್ಕೆ ನೀಡಲಾಯಿತು.
ಈ ವೇಳೆ ಮಾತನಾಡಿದ ಫೌಂಡೇಶನ್ ಅಧ್ಯಕ್ಷ ಆರೀಫ್ ರಾಯಚೂರು, 2019ರಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ರೈಬರ್ ಫೌಂಡೇಶನ್ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಜೊತೆಗೆ, ಬಡ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಕೊರೋನಾ ಬಳಿಕ ಸಾಕಷ್ಟು ಜನರು ಉದ್ಯೋಗಾವಕಾಶಗಳನ್ನು ಕಳೆದುಕೊಂಡು, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ದಿಸೆಯಲ್ಲಿ ಫೌಂಡೇಶನ್ ಮಹಿಳೆಯರಿಗೆ ಉಚಿತವಾಗಿ ಟೇಲರಿಂಗ್, ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ಇಂದು ಪ್ರತಿಯೊಬ್ಬರೂ ತಮ್ಮ ತುತ್ತಿನ ಚೀಲವನ್ನು ತಾವೇ ದುಡಿಮೆ ಮಾಡಿ, ಮತ್ತೊರ್ವರಿಗೆ ನೆರವಾಗಬೇಕು. ಈ ದಿಸೆಯಲ್ಲಿ ರೈಬರ್ ಫೌಂಡೇಶನ್ ನಿರುದ್ಯೋಗಿಗಳಿಗೆ ಬಂಡವಾಳ ಸಮೇತವಾಗಿ ತಳ್ಳು ಗಾಡಿಗಳನ್ನು ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರಿಗೆ ನೆರವಾಗುವ ಕೆಲಸವನ್ನು ಫೌಂಡೇಶನ್ ಮಾಡಲಿದೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ್ ಸದಸ್ಯರಾದ ಖಲೀಲ್ ಖಾಜಿ, ಡಾ. ಅಶ್ಪಾಕ್ ಬಿಜಾಪುರ, ಸಮೀರ್ ಪೀರಜಾದೆ, ಲ್ಯಾಕತ್ ಅಲಿ ಸೈಯದ್, ಏರ್ ಪೋರ್ಸ್ ನಿವೃತ್ತ ಅಧಿಕಾರಿ ಬಸೀರ್ ಅಹ್ಮದ್ ಖಾನ್ ಪಠಾಣ್ ಮುಂತಾದವರು ಇದ್ದರು.