ಬೆಂಗಳೂರು:- ಮಕರ ಸಂಕ್ರಾಂತಿಯ ದಿನವಾದ ಇಂದು ಪ್ರತಿವರ್ಷದಂತೆ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ.
ಈ ದಿನ ಸೂರ್ಯ ದೇವ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಪಥ ಬದಲಿಸಲಿರುವ ಹಿನ್ನೆಲೆ ಸಂಜೆ ಹೊತ್ತಿಗೆ ನೇಸರನ ಕಿರಣ ಗವಿಗಂಗಾಧರೇಶ್ವರ ದೇಗುಲದ ಬಲಭಾಗದ ಕಿಂಡಿಯಿಂದ ದೇವಸ್ಥಾನದೊಳಗೆ ಪ್ರವೇಶಿಸಲಿದೆ. ಸೂರ್ಯನ ರಶ್ಮಿ ಮೊದಲು ಗವಿಗಂಗಾಧರೇಶ್ವರನ ಪಾದ ಸ್ಪರ್ಶಿಸಲಿದೆ. ಬಳಿಕ ನಂದಿ ವಿಗ್ರಹದ ಮೂಲಕ ಸೂರ್ಯನ ಕಿರಣ ಹಾದು ಶಿವಲಿಂಗವನ್ನು ಸ್ಪರ್ಶಿಸಲಿದೆ. ಈ ಚಮತ್ಕಾರವನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇಗುಲದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ನಸುಕಿನ ಜಾವ 5:30ಕ್ಕೆ ಗವಿಗಂಗಾಧರೇಶ್ವರನಿಗೆ ವಿಶೇಷ ಪೂಜೆ ನೆರವೇರಿದೆ. ಶಂಖಪ್ರಭಶ್ಚನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಮಾತ್ರ ಮಧ್ಯಾಹ್ನ 12.30ರ ತನಕ ದೇವಾಲಯ ಬಾಗಿಲು ತೆರೆದಿರುತ್ತದೆ. ಮಧ್ಯಾಹ್ನ ಎರಡು ಗಂಟೆಗಳ ಕಾಲ ದೇವಾಲಯದ ಬಾಗಲಿನ್ನು ಮುಚ್ಚಲಾಗುತ್ತದೆ.
ನಂತರ, ಸಂಜೆ 4 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ. ಈ ವೇಳೆ ಸರಳವಾಗಿ ಪೂಜೆ ನೆರವೇರುತ್ತದೆ. ಬಳಿಕ ಸೂರ್ಯ ರಶ್ಮಿ ಸ್ಪರ್ಶಿಸುವ ಸಮಯದಲ್ಲಿ ಅಭಿಷೇಕ ಪ್ರಿಯನಿಗೆ ರುದ್ರಾಭಿಷೇಕ ಮಾಡಲಾಗುತ್ತದೆ. ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಸೂರ್ಯ ರಶ್ಮಿ ಸ್ಪರ್ಶಿಸುವ ದೃಶ್ಯವನ್ನು ವೀಕ್ಷಿಸಲು ದೇವಾಲಯದ ಹೊರ ಭಾಗದಲ್ಲಿ ಎಲ್ಇಡಿ ಪರದೆಗಳನ್ನು ಹಾಕಲಾಗಿದೆ.