ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ಕಾನೂನುಗಳನ್ನು ಹಾಗೂ ಕೇಂದ್ರ ಸರ್ಕಾರದ ಆದೇಶ ಪಾಲಿಸದ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಬೇಕು ಹಾಗೂ ನಗರಸಭೆ ಪೌರಾಯುಕ್ತರು, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಬೀದಿ ಬದಿ ವ್ಯಾಪಾರಸ್ಥರ ರಾಜ್ಯ ಉಪಾಧ್ಯಕ್ಷ ಭಾಷಾಸಾಬ್ ಮಲ್ಲಸಮುದ್ರ ನೇತೃತ್ವದಲ್ಲಿ ಮಂಗಳವಾರ ಹುಬ್ಬಳ್ಳಿ-ಗದಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಭಾಷಾಸಾಬ್, ಗದಗ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ 9 ಸ್ಥಳೀಯ ಸಂಸ್ಥೆಗಳ (ಟಿ.ವಿ.ಸಿ) ಪಟ್ಟಣ ಮಾರಾಟ ಸಮಿತಿಯ ಅಧ್ಯಕ್ಷರುಗಳಾದ ಪೌರಾಯುಕ್ತರು ಅಥವಾ ಮುಖ್ಯಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಅಂ.ಔ ಗಳು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಸರ್ಕಾರದ ಆದೇಶ ಹಾಗೂ ಕೇಂದ್ರ ಸರ್ಕಾರದ ಕಾಯ್ದೆ ಉಲ್ಲಂಘಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೀದಿ ವ್ಯಾಪಾರಿಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳು ಮನಬಂದಂತೆ ದುರಾಡಳಿತ ನಡೆಸಿದ್ದು, ಜಿಲ್ಲಾಧಿಕಾರಿಗಳು ಎಲ್ಲಾ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದು ಒತ್ತಾಯಿಸಿದರಲ್ಲದೆ, ಜಿಲ್ಲೆಯಾದ್ಯಂತ ಇರುವ ಬೀದಿಬದಿ ವ್ಯಾಪಾರಿಗಳ ಶುಲ್ಕ ಸಂಗ್ರಹಣೆಯಲ್ಲಿಯೂ ಕೂಡ ಭ್ರಷ್ಟಾಚಾರ ನಡೆಯುತ್ತಿದೆ. ಇದರಲ್ಲಿ ಎಲ್ಲ ಅಧಿಕಾರಿಗಳು ಶಾಮೀಲಾದಂತಿದೆ ಎಂದು ಬಾಷಾಬಾಸ್ ಮಲ್ಲಸಮುದ್ರ ಆರೋಪಿಸಿದರು.
ಈ ವೇಳೆ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪ್ರ. ಕಾರ್ಯದರ್ಶಿ ಚಂದ್ರಕಾಂತ್ ಚೌವ್ಹಾಣ್, ಮುಕ್ತುಂಸಾಬ್ ನಾಲಬಂದ, ಬಸವರಾಜ ತಾವರೆ, ಮಂಜುನಾಥ ಹೊಗೆಸೊಪ್ಪಿನ, ಆನಂದ ಕೋಳಿ, ಭೀಮಣ್ಣ ಕೋಳಿ, ಹನುಮಂತಪ್ಪ ರೋಣ, ಮಹಮ್ಮದ್ ಅಕ್ಕಿ, ಶಿವಾನಂದ ಹೂಗಾರ, ರಷೀದಾ ನದಾಫ್, ರೇಣುಕಾ ಹತ್ತಿವಾಲೇರ, ರಾಮವ್ವ ಲಮಾಣಿ, ಗಂಗವ್ವ ಹರಿಹರ, ಕುತಿಜಾ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.
ಬೀದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಫಲಾನುಭವಿಗಳ ಆಯ್ಕೆಗೆ ಸಮಿತಿ ರಚಿಸದೇ, ನೇರವಾಗಿ ಖೊಟ್ಟಿ ಫಲಾನುಭವಿಗಳಿಗೆ ಶಿಫಾರಸ್ಸು ಮಾಡಿದ್ದು ಖಂಡನೀಯ. ಅಲ್ಲದೇ, ಸರ್ಕಾರದಿಂದ ಬಂದ ಹಣವನ್ನು ಬಳಕೆ ಮಾಡದೆ ಅಧಿಕಾರಿಗಳು ಹಿಂದಿರುಗಿಸಿದ್ದಾರೆ. ಇವರಿಗೆ ಬೀದಿ ವ್ಯಾಪಾರಿಗಳ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲದಂತಾಗಿದ್ದು, ಇಂತಹ ಭ್ರಷ್ಟ ಅಧಿಕಾರಿಗಳಿಂದ ಬಡವರು ಬಡವರಾಗಿಯೇ ಬದುಕುತ್ತಿದ್ದಾರೆ.
– ಭಾಷಾಸಾಬ್ ಮಲ್ಲಸಮುದ್ರ.
ಬೀದಿ ಬದಿ ವ್ಯಾಪಾರಸ್ಥರ ಸಂಘದ
ಯೋಜನಾ ನಿರ್ದೇಶಕರ ಬಸವರಾಜ ಕೊಟ್ಟೂರು ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ 27 ಬೇಡಿಕೆಗಳನ್ನು ಅಜೆಂಡಾ ರೂಪದಲ್ಲಿ ಪಡೆದು, ಜಿಲ್ಲೆಯ 9 ಸ್ಥಳೀಯ ಸಂಸ್ಥೆಗಳ ಸಿ.ಓ ಹಾಗೂ ಸಿ.ಎ.ಓಗಳನ್ನು ಕರೆದು, ಮಾರ್ಚ್ 26ರಂದು ಸಾಯಂಕಾಲ 4 ಗಂಟೆಗೆ ಬೀದಿ ವ್ಯಾಪಾರಿಗಳ ಮುಖಂಡರ ಜೊತೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲು ತಿರ್ಮಾನಿಸಲಾಗಿದೆ ಎಂದರು.