ನಿಷ್ಕಾಳಜಿ ತೋರಿದ ಪಿಡಿಓ ಅಮಾನತು

0
Suspension of PDO for negligence
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುತಗಿ ಗ್ರಾಮದ ಒಂದು ಬೋರ್‌ವೇಲ್‌ನಿಂದ ಕಲುಷಿತ ನೀರು ಗ್ರಾಮದ ಮೂರು ಓಣಿಗಳಿಗೆ ಸರಬರಾಜು ಆಗಿರುವದರಿಂದ ಅಲ್ಲಿನ ನಿವಾಸಿಗಳಲ್ಲಿ ವಾಂತಿ ಬೇಧಿ ಉಂಟಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ಪಂಚಾಯತ ಸಿಇಓ ಸ್ವರೂಪ ಟಿ.ಕೆ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ ಅವರು ಮುತಗಿ ಗ್ರಾಮ, ಕಲಘಟಗಿ ತಾಲೂಕು ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರ ಆರೋಗ್ಯ ವಿಚಾರಿಸಿದರು.

ಸಿಇಓ ಅವರು ನೀರು ಸರಬರಾಜು ಮಾಡುವ ಬೋರ್‌ವೇಲ್ ಸ್ಥಳ, ಓಎಚ್‌ಟಿ ಮತ್ತು ಮುತಗಿ ಗ್ರಾಮದಲ್ಲಿನ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ವಿಚಾರಿಸಿದರು.

ಮುತಗಿ ಗ್ರಾಮದಲ್ಲಿ ತೆರೆದಿರುವ ತಾತ್ಕಾಲಿಕ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆಗೆ ಬಂದಿರುವ ಮತ್ತು ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಮಾತನಾಡಿಸಿ, ಆರೋಗ್ಯ ವಿಚಾರಿಸಿದರು. ಚಿಕಿತ್ಸೆ, ಔಷಧಿ ಸಕಾಲಕ್ಕೆ ಮತ್ತು ಉತ್ತಮ ರೀತಿಯಲ್ಲಿ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದರು.

Suspension of PDO for negligence

ನಂತರ ಜಿಲ್ಲಾಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಲಘಟಗಿ ತಾಲೂಕಿನ ವ್ಯಾಪ್ತಿಯ ಮುತ್ತಗಿ ಗ್ರಾಮದಲ್ಲಿ ಅಕ್ಟೋಬರ್ 23ರಂದು 10 ಪ್ರಕರಣಗಳು, ಅ. 24ರಂದು 27 ವಾಂತಿ ಬೇಧಿ ಪ್ರಕರಣಗಳು ವರದಿಯಾಗಿದ್ದು, ಇಲ್ಲಿಯವರಿಗೆ ಒಟ್ಟು 46 ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಪ್ರಕರಣಗಳಲ್ಲಿ ತೀವ್ರ ಸ್ವರೂಪದ 10 ರೋಗಿಗಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ ಬೇಧಿ ಪ್ರಕರಣಗಳು ವರದಿಯಾದ ತಕ್ಷಣ ಗ್ರಾಮದಲ್ಲಿ ತುರ್ತುಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗಿದೆ. ಸದರಿ ಘಟಕಕ್ಕೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ನಿಯೋಜಿಸಿ ಅವಶ್ಯಕ ಔಷಧಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ 21ರಂದು ವಿಪರೀತ ಮಳೆ ಬಿದ್ದ ಕಾರಣ ಕಲುಷಿತ ನೀರು ಕುಡಿಯುವ ನೀರಿಗೆ ಸೇರ್ಪಡೆಗೊಂಡಿದೆ. ಕುಡಿಯುವ ನೀರಿನ ಬೋರ್‌ವೆಲ್‌ನಲ್ಲಿ ಕಲುಷಿತ ನೀರು ಸೇರ್ಪಡೆಗೊಂಡಿರುವದರಿಂದ ಹಾಗೂ ಓವರ್ ಹೆಡ್ ಟ್ಯಾಂಕ್ ಮೂಲಕ ಸರಬರಾಜು ಆಗುವ ನೀರಿನ್ನು ಕ್ಲೋರಿನೇಷನ್ ಮಾಡದೇ ಸರಬರಾಜು ಮಾಡಿರುವದರಿಂದ ಮುತಗಿ ಗ್ರಾಮದಲ್ಲಿ ವಾಂತಿ ಬೇಧಿ ಪ್ರಕರಣಗಳು ವರದಿಯಾಗಿರುವುದಾಗಿ ಪ್ರಾಥಮಿಕ ಹಂತದ ಪರಿಶೀಲನೆಯಲ್ಲಿ ತಿಳಿದು ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಶುದ್ಧವಾದ ಕುಡಿಯುವ ನೀರನ್ನು ಗ್ರಾಮ ಪಂಚಾಯತಿಯಿಂದ ಸರಬರಾಜು ಮಾಡದೇ ಇರುವುದರಿಂದ ಕಲುಷಿತ ನೀರನ್ನು ಸೇವಿಸಿ, 44ಕ್ಕೂ ಹೆಚ್ಚು ಗ್ರಾಮಸ್ಥರು ವಾಂತಿ-ಬೇಧಿಯಿಂದ ಕಲಘಟಗಿ ತಾಲ್ಲೂಕು ಆಸ್ಪತ್ರೆಗೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನಲೆಯಲ್ಲಿ ಮುಂಜಾಗ್ರತೆ ಕ್ರಮ ವಹಿಸದೇ ಇರುವ ಕಾರಣ ಮತ್ತು ಕರ್ತವ್ಯದಲ್ಲಿ ನಿರ್ಲಕ್ಷತೆ ವಹಿಸಿದ್ದರಿಂದ ಪಿಡಿಓ ಪ್ರವೀಣಕುಮಾರ ಗಣಿ ಅವರನ್ನು ಅಮಾನತ್ತುಗೊಳಿಸಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಅವರು ಆದೇಶ ಹೊರಡಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here