ವಿಜಯಸಾಕ್ಷಿ ಸುದ್ದಿ, ಬೆಳಗಾವಿ/ಗದಗ: ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ-ಬೆಟಗೇರಿಯ ವೃತ್ತಿಪರ ನೇಕಾರರು ರಾಜ್ಯದ ಎಲ್ಲಾ ನೇಕಾರರೊಂದಿಗೆ ಶುಕ್ರವಾರ ಬೆಳಗಾವಿ ಸುವರ್ಣಸೌಧ ಚಲೋ ಹೋರಾಟದಲ್ಲಿ ಭಾಗಿಯಾದರು.
ನೇಕಾರರ ಬೇಡಿಕೆಗಳು ಇತ್ಯರ್ಥವಾಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ. ಆತ್ಮಹತ್ಯೆ ಮಾಡಿಕೊಂಡ 53 ಜನ ನೇಕಾರರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ಕೊಡಬೇಕು, ೫೫ ವರ್ಷ ಮೇಲ್ಪಟ್ಟ ನೇಕಾರರಿಗೆ ಮಾಸಿಕ 5000 ಪಿಂಚಣಿ, ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ನೇಕಾರರನ್ನೂ ಕಾರ್ಮಿಕರೆಂದು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸಬೇಕು. ನಿವೇಶನ ಇಲ್ಲದವರಿಗೆ ನಿವೇಶನ ಹಂಚಿಕೆಯಾಗಬೇಕು. ನೇಕಾರಿಕೆ ವೃತ್ತಿಯು ಅಸ್ಥಿರತೆಯ ಮಾರುಕಟ್ಟೆಯಿಂದ ಅವನತಿಯ ಅಂಚಿಗೆ ಬಂದು ತಲುಪಿದೆ. ಹಾಗಾಗಿ ಸರಕಾರ ನೇಕಾರರ ಬೇಡಿಕೆಗಳನ್ನು ಪರಿಶೀಲನೆ ಮಾಡಿ, ನಮ್ಮೆಲ್ಲ ಬೇಡಿಕೆಗಳು ಕಟ್ಟಕಡೆಯ ನೇಕಾರನಿಗೂ ತಲುಪುವಂತೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರಕಿ ಸರ್ಕಾರಕ್ಕೆ ಒತ್ತಾಯಿಸಿದರು.
ವಿಧಾನಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ನೇಕಾರರ ಅಹವಾಲುಗಳನ್ನು ಸ್ವೀಕರಿಸಿ, ನಿಮ್ಮ ಬೇಡಿಕೆಗಳನ್ನು ಸರ್ಕಾರ ಮಟ್ಟದಲ್ಲಿ ಇತ್ಯರ್ಥಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ನಂತರ ಕೆಎಚ್ಡಿಸಿ ನಿಗಮದಲ್ಲಿ ನೂರಾರು ಕೋಟಿ ಹಗರಣವನ್ನು ತನಿಖೆ ಮಾಡುವಂತೆ ಕೆಎಚ್ಡಿಸಿಯ ನೇಕಾರರು ಆಗ್ರಹಿಸಿದರು. ಸರ್ಕಾರದ ಪರವಾಗಿ ನೇಕಾರರ ಅಹವಾಲುಗಳನ್ನು ಸ್ವೀಕರಿಸಲು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಸರಕಾರದ ಪರವಾಗಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ, ರಾಜು ದಡಿ, ಮಾಧುಸಾ ಮೇರವಾಡೆ, ವಿರೂಪಾಕ್ಷ ಐಲಿ, ಬಸವರಾಜ್ ಕರಿ, ಪ್ರಕಾಶ್ ಹಿಂಡಿ, ನಾರಾಯಣ ಗೋಟೂರ, ಕೃಷ್ಣ ಕೊಪ್ಪರದ, ನಾರಾಯಣಪ್ಪ ಕೋಣಿ, ಹುಲಕುಂಟೆಪ್ಪ ಗೋಟೂರ, ಶಂಕ್ರಪ್ಪ ಮಾದಗುಂಡಿ, ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಹಾಗೂ ಗದಗ-ಬೆಟಗೇರಿ ಮತ್ತು ರಾಜ್ಯದ ಎಲ್ಲಾ ವೃತ್ತಿಪರ ನೇಕಾರ ಬಾಂಧವರು ಭಾಗಿಯಾಗಿದ್ದರು.